ಕಾರ್ಕಳ: ನಗರೀಕರಣ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಂದ ಜೀವ ವೈವಿಧ್ಯ ಅಪಾಯದ ಅಂಚಿನಲ್ಲಿದೆ ಎಂದು ಭುವನೇಂದ್ರ ಕಾಲೇಜಿನ ಹಳೆ ವಿದ್ಯಾರ್ಥಿ ಡಾ.ಕೆ.ಗೀತಾ ನಾಯಕ್ ಹೇಳಿದರು.
ಇಲ್ಲಿನ ಭುವನೇಂದ್ರ ಕಾಲೇಜಿನಲ್ಲಿ ಇತ್ತೀಚೆಗೆ ಕಾರ್ಕಳ ಬರ್ಡರ್ಸ್ ಗ್ರೂಪ್, ಭುವನೇಂದ್ರ ನೇಚರ್ ಕ್ಲಬ್ ಹಾಗೂ ಎಸ್.ಎ.ಹುಸ್ಸೇನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಪಕ್ಷಿಗಳ ಸಮಗ್ರ ಅಧ್ಯಯನ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೊಬೈಲ್ ಹಾಗೂ ಇತರ ತರಂಗಗಳಿಂದ ಪಕ್ಷಿ ಸಂಕುಲ ನಾಶವಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಅದರ ವೈಜ್ಞಾನಿಕ ಅಧ್ಯಯನ ಅತೀ ಅಗತ್ಯ ಎಂದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ವೈ. ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈಜ್ಞಾನಿಕ ಪ್ರಯೋಗಗಳು ಜೀವ ವೈವಿಧ್ಯತೆಯ ಸಂರಕ್ಷಣೆಯಲ್ಲಿ ಅನನ್ಯ ಪಾತ್ರ ವಹಿಸಬೇಕು ಎಂದರು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಎಲೆಕ್ಟ್ರಾನಿಕ್ ಡಿಸೈನ್ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಪಕ್ಷಿ ಆಂಡ್ರಾಯಿಡ್ ತಂತ್ರಜ್ಞಾನದ ಜನಕ ಪ್ರೊ. ಎಚ್.ಎಸ್. ಜಮದಗ್ನಿ ಹಾಗೂ ಪರಿಸರ ವಿಜ್ಞಾನ ವಿಭಾಗದ ವಿಜ್ಞಾನಿ ಡಾ.ಹರೀಶ್ ಆರ್. ಭಟ್ ಅವರು ಪಕ್ಷಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಪರಿಸರದಲ್ಲಿ ಪಕ್ಷಿ ವೀಕ್ಷಣೆಯನ್ನು ಹಮ್ಮಿಕೊಳ್ಳಲಾಯಿತು. ಎಸ್.ಎ. ಹುಸೇನ್ ಟ್ರಸ್ಟ್ ಅಧ್ಯಕ್ಷ ಹಾಗೂ ಕಾಲೇಜು ಆಡಳಿತ ಮಂಡಳಿ ಸದಸ್ಯ ಡಾ. ಎ.ಭರತೇಶ್ ಸ್ವಾಗತಿಸಿದರು. ಟ್ರಸ್ಟ್ನ ಕಾರ್ಯದರ್ಶಿ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಭಟ್ ಪಿ ಕಾರ್ಯಕ್ರಮ ನಿರೂಪಿಸಿದರು.