ಶಿರಸಿ: ಹಿಂದಿನ ಸಾಲಿನಲ್ಲಿ ನಿರ್ಮಿಸಿದ್ದ ತಾಲ್ಲೂಕಿನ ಮುಷ್ಕಿ-ಶಿರಗಣಿ ರಸ್ತೆ ಮಳೆಗಾಲದಲ್ಲಿ ತನ್ನ ಒಳಗಿನ ಹೂರಣ ಹೊರ ಚೆಲ್ಲಿದೆ. ಡಾಂಬರ್ ರಸ್ತೆಯ ಮೇಲೆ ಜೆಲ್ಲಿ ಕಣಗಳು ಮತ್ತು ಮಣ್ಣು ಮಾತ್ರ ಉಳಿದುಕೊಂಡಿದೆ.
ಡಾಂಬರ್ ರಸ್ತೆ ಬೇಕು ಎಂಬುದು ವಾನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಷ್ಕಿ ಶಿರಗಣಿ ಭಾಗದ ಜನರ ದಶಕಗಳ ಬೇಡಿಕೆ.
ಹಿಂದಿನ ಸಾಲಿನಲ್ಲಿ ಒಟ್ಟೂ ಒಂಬತ್ತು ಕಿ.ಮೀ. ರಸ್ತೆಯಲ್ಲಿ ಪ್ರಾರಂಭದ ಒಂದೂವರೆ ಕಿ.ಮೀ. ರಸ್ತೆ ಮಾತ್ರ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ರೂ 30ಲಕ್ಷ ವೆಚ್ಚದಲ್ಲಿ ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗ ಉಸ್ತುವಾರಿಯಲ್ಲಿ ಈ ರಸ್ತೆ ನಿರ್ಮಾಣಗೊಂಡಿದೆ.
ಆದರೆ ರಸ್ತೆ ನಿರ್ಮಾಣಗೊಂಡ ಕೆಲವೇ ತಿಂಗಳಲ್ಲಿ ತನ್ನ ಗುಣಮಟ್ಟ ತೋರಿದೆ. ಮಳೆ ನೀರಿನ ಜೊತೆ ಡಾಂಬರ್ ತೊಳೆದುಕೊಂಡು ಹೋಗಿದ್ದು, ಕೇವಲ ಜೆಲ್ಲಿ ಮಾತ್ರ ರಸ್ತೆಯ ಮೇಲೆ ಉಳಿದಿರುವುದು ಅಲ್ಲಲ್ಲಿ ಗೋಚರಿಸುತ್ತದೆ. ಇದರಿಂದ ವಾಹನ ಸಂಚಾರಕ್ಕೆ ಸಹ ತೊಡಕಾಗಿದೆ. `ಬಹು ವರ್ಷಗಳ ಬೇಡಿಕೆಯ ನಂತರ ಎರಡು ಸಿಡಿ ಹಾಗೂ ಒಂದೂವರೆ ಕಿಮೀ ರಸ್ತೆ ನಿರ್ಮಾಣವಾಗಿದೆ.
ಹಳ್ಳಿ ಭಾಗದವರು ಡಾಂಬರ್ ರಸ್ತೆ ಕಾಣುವದೇ ಕಷ್ಟ. ಊರಿಗೆ ಮಂಜೂರಿ ಆಗಿರುವ ರಸ್ತೆಯೂ ಕಳಪೆ ಗುಣಮಟ್ಟದ್ದಾಗಿದೆ. ತಕ್ಷಣ ರಸ್ತೆ ಸರಿಪಡಿಸಬೇಕು ಮತ್ತು ಇನ್ನುಳಿದ ರಸ್ತೆ ನಿರ್ಮಾಣ ಮಾಡಬೇಕು~ ಎಂದು ರಸ್ತೆ ಹೋರಾಟ ಸಮಿತಿ ಅಧ್ಯಕ್ಷ ವಿ.ಎಸ್.ಭಟ್ಟ ಆಗ್ರಹಿಸಿದ್ದಾರೆ.
ಅಪಾಯಕಾರಿ ಸೇತುವೆ ಅಂಚು: ವಾನಳ್ಳಿ-ಕಕ್ಕಳ್ಳಿ ಮಾರ್ಗ ಮಧ್ಯೆ ತೋಟಿಮನೆ ಸಮೀಪ ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಅಪಾಯಕಾರಿಯಾಗಿದೆ. ಈ ಭಾಗದಲ್ಲಿ ಹೆಚ್ಚು ಮಳೆಯಾದಾಗ ತಗ್ಗಿನಲ್ಲಿರುವ ಸೇತುವೆಯ ಮೇಲೆ ನೀರು ಉಕ್ಕಿ ಹರಿಯುತ್ತದೆ.
ಇತ್ತೀಚೆಗೆ ಬಿದ್ದ ಭಾರೀ ಮಳೆಯಲ್ಲಿ ಸೇತುವೆ ಮೇಲೆ ನೀರು ಹರಿದಾಗ ಸೇತುವೆಯ ಒಂದು ಭಾಗ ಕುಸಿದಿದ್ದು, ಕಾಲು ಭಾಗ ರಸ್ತೆಯನ್ನು ತಿಂದು ಹಾಕಿದೆ. ಕೇವಲ ಒಂದು ವಾಹನ ಮಾತ್ರ ಹಾದು ಹೋಗುವಷ್ಟು ಅಗಲ ಭಾಗ ರಸ್ತೆ ಉಳಿದುಕೊಂಡಿದೆ. ಸೇತುವೆ ಇನ್ನಷ್ಟು ಕುಸಿಯುವ ಮೊದಲು ದುರಸ್ತಿಗೊಳಿಸಬೇಕಾಗಿದೆ. ಸೇತುವ ಮತ್ತಷ್ಟು ಕುಸಿದರೆ ವಾನಳ್ಳಿ, ಕಕ್ಕಳ್ಳಿ, ಶಿರಗಣಿ, ಮುಷ್ಕಿ ಭಾಗಕ್ಕೆ ಸಂಪರ್ಕ ಕಡಿದು ಹೋಗುವ ಸಾಧ್ಯತೆಗಳಿವೆ.