ಬೆಂಗಳೂರು: ಜಯನಗರ ಸಮೀಪದ ಸೋಮೇಶ್ವರನಗರದಲ್ಲಿ ನಿರ್ಮಾಣ ಹಂತದ ಅಪಾರ್ಟ್ಮೆಂಟ್ ಕಟ್ಟಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಟ್ಟಡದ ಮಾಲೀಕ ಸಲೀಂ (55), ಅವರ ಪತ್ನಿ ಮತ್ತು ಮಗನನ್ನು ಸೋಮೇಶ್ವರನಗರ ಪೊಲೀಸರು ಸೋಮವಾರ ಬಂಧಿಸಿ ಬಿಡುಗಡೆಗೊಳಿಸಿದರು.
ಆಡುಗೋಡಿ ನಿವಾಸಿಯಾದ ಸಲೀಂ ಅವರ ಒಡೆತನದ ಆರ್.ಕೆ.ಗೋಲ್ಡ್ ಡೆವಲಪರ್ಸ್ ಸಂಸ್ಥೆಯಿಂದ ಸೋಮೇಶ್ವರನಗರ ಒಂಬತ್ತನೇ ಅಡ್ಡರಸ್ತೆಯಲ್ಲಿ ಏಳು ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟಡ ನಿರ್ಮಿಸಲಾಗುತ್ತಿತ್ತು. ಆ ಕಟ್ಟಡ ಆ.19ರಂದು ಕುಸಿದು ನೇಪಾಳ್ ಪಾಸ್ವಾನ್, ನಿರಂಜನ್ ಮೊಹಾಂತಿ ಮತ್ತು ನಾಗಮ್ಮ ಎಂಬ ಕಾರ್ಮಿಕರು ಸಾವನ್ನಪ್ಪಿದ್ದರು. ಅಲ್ಲದೇ, 16 ಕಾರ್ಮಿಕರು ಗಾಯಗೊಂಡಿದ್ದರು.
ಘಟನೆ ಸಂಬಂಧ ಸಲೀಂ, ಆರ್.ಕೆ.ಗೋಲ್ಡ್ ಡೆವಲಪರ್ಸ್ ಸಂಸ್ಥೆಯ ನಿರ್ದೇಶಕರ ಮಂಡಳಿಯಲ್ಲಿ ಸದಸ್ಯರಾಗಿರುವ ಅವರ ಪತ್ನಿ ಫಾತಿಮಾ ಬೇಗಂ ಮತ್ತು ಮಗ ಮುದಾಸೀರ್ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಘಟನೆ ನಂತರ ತಲೆಮರೆಸಿಕೊಂಡಿದ್ದ ಆ ಮೂರು ಮಂದಿ ನಗರದ 52ನೇ ತ್ವರಿತ ನ್ಯಾಯಾಲಯದಲ್ಲಿ ಶನಿವಾರ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ನ್ಯಾಯಾಲಯ ಜಾಮೀನು ನೀಡಿ ಹೊರಡಿಸಿದ್ದ ಆದೇಶದ ಪ್ರತಿಯೊಂದಿಗೆ ಸೋಮವಾರ ಮಧ್ಯಾಹ್ನ ಠಾಣೆಗೆ ಹಾಜರಾದ ಅವರನ್ನು ಬಂಧಿಸಿ, ಸಂಜೆ ವೇಳೆಗೆ ಬಿಡುಗಡೆಗೊಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.