ಮಡಿಕೇರಿ: ನಗರದ ಕಾಲೇಜು ರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾರ್ಯವು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಚಾಲಕರಿಗೆ ಹಾಗೂ ಪಾದಚಾರಿಗಳು ಸಾಕಷ್ಟು ಸಂಕಟ ಅನುಭವಿಸುತ್ತಿದ್ದಾರೆ.
ಚೌಕಿಯಿಂದ ಕಾನ್ವೆಂಟ್ ಜಂಕ್ಷನ್ವರೆಗಿನ ರಸ್ತೆಯನ್ನು ಅಂದಾಜು ರೂ 2 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗಿದೆ. ರಸ್ತೆಯು ಅತ್ಯುತ್ತಮ ಗುಣಮಟ್ಟದ್ದಾಗಿದೆ ಎಂದು ಈಗಾಗಲೇ ನಾಗರಿಕರು ಪ್ರಶಂಸೆ ಕೂಡ ಮಾಡಿದ್ದಾರೆ. ಆದರೆ, ರಸ್ತೆಯ ಬದಿಯ ಚರಂಡಿ ನಿರ್ಮಾಣ ಕಾರ್ಯ ಮಾತ್ರ 2-3 ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ.
ರಸ್ತೆ ಪೂರ್ಣಗೊಂಡು ಹಲವಾರು ದಿನಗಳು ಕಳೆದರೂ ಚರಂಡಿ ಕಾರ್ಯ ಪೂರ್ಣಗೊಂಡಿಲ್ಲ. ಇನ್ನು ಹದಿನೈದು ದಿನಗಳು ಕಳೆದರೆ ಮಳೆಗಾಲ ಆರಂಭವಾಗಿ ಬಿಡುತ್ತದೆ. ಆಗ, ಚರಂಡಿ ವ್ಯವಸ್ಥೆ ಸರಿಯಿಲ್ಲದಿದ್ದರೆ ನೀರು ಅಂಗಡಿಯೊಳಗೇ ನುಗ್ಗುವ ಅಪಾಯವಿದೆ ಎಂದು ಓರ್ವ ಅಂಗಡಿ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಳೆಗಾಲ ಆರಂಭವಾಗಿ ಬಿಟ್ಟರೆ 6 ತಿಂಗಳು ಯಾವುದೇ ಕಾಮಗಾರಿಗಳನ್ನು ಕೈಗೊಳ್ಳುವುದು ಕಷ್ಟವಾಗುತ್ತದೆ. ಆದ್ದರಿಂದ ಆದಷ್ಟು ಬೇಗನೇ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಚಾರಕ್ಕೆ ಅಡ್ಡಿ: ಚರಂಡಿ ನಿರ್ಮಾಣಕ್ಕೆಂದು ತರಿಸ ಲಾಗಿರುವ ಮರಳು, ಜಲ್ಲಿಕಲ್ಲನ್ನು ರಸ್ತೆಯ ಮೇಲೆಯೇ ಸುರಿದಿರುವ ಕಾರಣ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ.
ಇದಲ್ಲದೇ, ಈ ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಇರುವುದರಿಂದ ಯಾವಾಗಲೂ ವಾಹನಗಳ ದಟ್ಟಣೆ ಸಮಸ್ಯೆ ಕಾಡುತ್ತಿದೆ ಎಂದು ವಾಹನ ಚಾಲಕ ರಾಜಶೇಖರ್ ಅಳಲು ತೋಡಿಕೊಂಡರು.
ವ್ಯಾಪಾರಕ್ಕೂ ಕುತ್ತು: ನಿಧಾನ ಗತಿಯ ಕಾಮಗಾರಿಯಿಂದಾಗಿ ತಮ್ಮ ಅಂಗಡಿಗಳಿಗೆ ಬರುತ್ತಿದ್ದ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ. ಇದರಿಂದಾಗಿ ವ್ಯಾಪಾರವೂ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥರು ದೂರಿದ್ದಾರೆ.
ಆದಷ್ಟು ಬೇಗನೇ ಚರಂಡಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ವ್ಯಾಪಾರಸ್ಥರು ನಗರಸಭೆಯ ಎಂಜಿನಿಯರ್ಗಳನ್ನು ಕೋರಿದ್ದಾರೆ.