ಬೆಂಗಳೂರು: ಶತಮಾನೋತ್ಸವ ಹೊಸ್ತಿಲಲ್ಲಿರುವ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ 2012–13ನೇ ಸಾಲಿನಲ್ಲಿ ರೂ. 31 ಕೋಟಿ ನಿವ್ವಳ ಲಾಭ ಗಳಿಸಿದೆ. 2011–12ನೇ ಸಾಲಿನಲ್ಲಿ ರೂ. 29 ಕೋಟಿ ಲಾಭ ಗಳಿಸಿತ್ತು.
ಶನಿವಾರ ನಡೆದ ಬ್ಯಾಂಕಿನ 88ನೇ ವಾರ್ಷಿಕ ಮಹಾಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ಸಾಧಿಸಿರುವ ಪ್ರಗತಿ ಕುರಿತು ವಿವರ ನೀಡಿದ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅವರು, 2012–13ನೇ ಸಾಲಿನಲ್ಲಿ 16.54 ಲಕ್ಷ ರೈತರಿಗೆ ರೂ. 6,347 ಕೋಟಿ ಕೃಷಿ ಸಾಲ ವಿತರಿಸಲಾಗಿದೆ. ಜತೆಗೆ ಶೇ 9ರಷ್ಟು ಲಾಭಾಂಶ ಪ್ರಕಟಿಸಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ 20.50 ಲಕ್ಷ ರೈತರಿಗೆ ರೂ. 8,311 ಕೋಟಿ ಬೆಳೆ ಸಾಲ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಇಡೀ ದೇಶದಲ್ಲೇ 4800ಕ್ಕೂ ಹೆಚ್ಚು ಪ್ರಾಥಮಿಕ ಸಹಕಾರ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ಗಳ ಮೂಲಕ ಕೇವಲ ಶೇಕಡಾ 5.5ರಷ್ಟು ಬಡ್ಡಿಗೆ ಬೆಳೆ ಸಾಲ ವಿತರಿಸುತ್ತಿರುವ ಏಕೈಕ ಬ್ಯಾಂಕ್ ಇದಾಗಿದೆ ಎಂದರು.
2012–13ನೇ ಸಾಲಿನ ಅಂತ್ಯಕ್ಕೆ ಬ್ಯಾಂಕಿನ ಒಟ್ಟು ಠೇವಣಿ ರೂ. 6,003 ಕೋಟಿಯಷ್ಟಾಗಿದೆ. ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವಸೂಲಾಗದ ಸಾಲದ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ ಎಂದರು.