ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷದ ಪ್ರಣಾಳಿಕೆ ಸಮಿತಿಯಲ್ಲಿ ನಾನು ಇರುವುದಾಗಿ ಹೇಳಿ ಜನಾರ್ದನ ಪೂಜಾರಿಯವರು ಟೀಕಿಸಿರುವ ವರದಿಯು `ಪ್ರಜಾವಾಣಿ' ಯಲ್ಲಿ (ಡಿ.26) ಪ್ರಕಟವಾಗಿದೆ. ನಾನು ಸದರಿ ಪಕ್ಷದ ಪ್ರಣಾಳಿಕೆ ಸಮಿತಿಯಲ್ಲಿರುವುದು ಅಪ್ಪಟ ಸುಳ್ಳು. ಇಂತಹ ವದಂತಿಗಳನ್ನು ಮರುಪರೀಕ್ಷಿಸದೆ ಟೀಕಿಸುವುದು ಸರಿಯಲ್ಲ. ಇಷ್ಟಕ್ಕೂ ಯಡಿಯೂರಪ್ಪನವರ ಪಕ್ಷದ ಯಾರೂ ನನ್ನನ್ನು ಸಂಪರ್ಕಿಸಿಲ್ಲ.
ಸಂಪರ್ಕಿಸಿದರೂ ನಾನು ಯಾವುದೇ ಸಮಿತಿಯಲ್ಲಿರಲು ಖಂಡಿತ ಒಪ್ಪುವುದಿಲ್ಲ. ಅದು ನಾನು ನಂಬಿದ ನಿಲುವಿಗೆ ವಿರುದ್ಧವಾದದ್ದು. ಆದ್ದರಿಂದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನಾಯಕರನ್ನೂ ಒಳಗೊಂಡಂತೆ ಯಾವ ಪಕ್ಷದ ನಾಯಕರಿಂದಲೂ ಪಾಠ ಹೇಳಿಸಿಕೊಳ್ಳುವ ಅಗತ್ಯ ನನಗಿಲ್ಲ ಎಂದು ವಿನಯಪೂರ್ವಕವಾಗಿಯೇ ತಿಳಿಸಬಯಸುತ್ತೇನೆ. ಇಂತಹ ಸುಳ್ಳು ಸುದ್ದಿ ಹಬ್ಬಿಸುವ ಮತ್ತು ನಂಬುವ ವ್ಯಕ್ತಿಗಳು ದಯವಿಟ್ಟು `ಪ್ರತ್ಯಕ್ಷವಾದರೂ ಪರೀಕ್ಷಿಸಿ ನೋಡು' ಎಂಬ `ಪ್ರಾಥಮಿಕ ಶಾಲೆಯ ಪಾಠ'ವನ್ನು ನೆನೆಯಬೇಕೆಂದು ವಿನಂತಿಸುತ್ತೇನೆ!