ಮುಂಬೈ(ಪಿಟಿಐ): ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ಗೆ 14 ವರ್ಷ ವಯಸ್ಸಿನೊಳಗಿನವರ ಮುಂಬೈ ಕ್ರಿಕೆಟ್ ತಂಡದಲ್ಲಿ ಸ್ಥಾನ ಲಭಿಸಿದೆ.
ಮುಂದಿನ ಕ್ರಿಕೆಟ್ ಋತುವಿಗೆ ತರಬೇತಿ ನೀಡಲು ಮುಂಬೈ ಕ್ರಿಕೆಟ್ ಸಂಸ್ಥೆಯು (ಎಂಸಿಎ) ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟಿಸಿದೆ. ಅದರಲ್ಲಿ 12ರ ಹರೆಯದ ಅರ್ಜುನ್ ಅವರ ಹೆಸರೂ ಇದೆ.
ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ ಧೀರೂಭಾಯಿ ಅಂಬಾನಿ ಶಾಲೆಯ ವಿದ್ಯಾರ್ಥಿಯಾಗಿರುವ ಅರ್ಜುನ್ ಎಡಗೈ ಬ್ಯಾಟ್ಸ್ಮನ್ ಹಾಗೂ ಮಧ್ಯಮ ವೇಗದ ಎಡಗೈ ಬೌಲರ್.
`ಎಂಸಿಎ ನಡೆಸಿದ 14 ವರ್ಷದೊಳಗಿನವರ ಬೇಸಿಗೆ ಶಿಬಿರದ ಟೂರ್ನಿಯಲ್ಲಿ ಅರ್ಜುನ್ ಉತ್ತಮ ಪ್ರದರ್ಶನ ತೋರಿದ್ದರು. ಐದು ಪಂದ್ಯಗಳಿಂದ 250 ರನ್ ಗಳಿಸಿದ್ದರು~ ಎಂದು ಎಂಸಿಎ ಜಂಟಿ ಕಾರ್ಯದರ್ಶಿ ಹಾಗೂ ಜೂನಿಯರ್ ಆಯ್ಕೆ ಸಮಿತಿ ಸಂಯೋಜಕ ಡಾ.ಪಿ.ವಿ.ಶೆಟ್ಟಿ ನುಡಿದಿದ್ದಾರೆ.
ಖಾರ್ ಕೇಂದ್ರ ಇತ್ತೀಚೆಗೆ ಆಯೋಜಿಸಿದ್ದ ಟೂರ್ನಿಯಲ್ಲಿ ಅರ್ಜುನ್ ಶತಕ ಗಳಿಸಿದ್ದರು. ಈಗ ಆಯ್ಕೆಯಾದ ಸಂಭವನೀಯ ಆಟಗಾರರು ಜುಲೈ ಮೂರರಿಂದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.