ಹೊನ್ನಾಳಿ: ಸ್ವಾಭಿಮಾನಿ, ಸಮೃದ್ಧ ಭಾರತ ನಿರ್ಮಾಣ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕನಸು. ಅದನ್ನು ನನಸು ಮಾಡುವ ಗುರುತರ ಜವಾಬ್ದಾರಿ ಯುವಕರ ಮೇಲಿದೆ ಎಂದು ಗುರು ಗೋವಿಂದ ಭಟ್ಟ-ಸಂತ ಶಿಶುನಾಳ ಷರೀಫ ಕನ್ನಡ ಯುವಕ ಸಂಘದ ಅಧ್ಯಕ್ಷ ಕೆ.ವಿ. ಶ್ರೀಧರ್ ಹೇಳಿದರು.
12-12-2012ರ ಪ್ರಯುಕ್ತ ಪಟ್ಟಣದ `ಅಬ್ದುಲ್ ಕಲಾಂ ಮಾದರಿ ಶಾಲೆ'ಯ ಮಕ್ಕಳಿಗೆ ಬುಧವಾರ ಸಿಹಿ ವಿತರಿಸಿ ಅವರು ಮಾತನಾಡಿದರು.ಭಾರತ ದೇಶದಲ್ಲಿ ಎಲ್ಲವೂ ಇದೆ. ಆದರೆ, ನಮ್ಮವರು ಏನನ್ನೋ ಅರಸಿ ವಿದೇಶಗಳಿಗೆ ತೆರಳುತ್ತಾರೆ. ಇದು ಸಲ್ಲದು. ಪ್ರತಿಭಾ ಪಲಾಯನ ತಡೆಗಟ್ಟಿ ಸಮೃದ್ಧ ಭಾರತ ದೇಶ ನಿರ್ಮಾಣಕ್ಕೆ ನಾವೆಲ್ಲಾ ಶ್ರಮಿಸೋಣ ಎಂಬ ಅಬ್ದುಲ್ ಕಲಾಂ ಅವರ ಮಾತುಗಳು ನಮಗೆ ಪ್ರೇರಣೆಯಾಗಲಿ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲಾ ಮುನ್ನಡೆಯೋಣ ಎಂದು ಅವರು ತಿಳಿಸಿದರು.
ಅಬ್ದುಲ್ ಕಲಾಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪರ್ವೇಜ್ ಅಹಮ್ಮದ್, ಸಂಘಟನಾ ಕಾರ್ಯದರ್ಶಿ ಇಲಿಯಾಸ್ ಅಹಮ್ಮದ್, ಖಜಾಂಚಿ ಫರೀದ್ ಅಹಮ್ಮದ್, ಸದಸ್ಯ ಫರೀದ್ ಖಾನ್ ಸೂರಿ, ಶಾಲಾ ಮುಖ್ಯ ಶಿಕ್ಷಕಿ ಸಾವಿತ್ರಮ್ಮ, ಗುರು ಗೋವಿಂದ ಭಟ್ಟ-ಸಂತ ಶಿಶುನಾಳ ಷರೀಫ ಕನ್ನಡ ಯುವಕ ಸಂಘದ ಕಾರ್ಯದರ್ಶಿ ಜಾವೇದ್, ಸದಸ್ಯರಾದ ಅಣ್ಣಪ್ಪ ಜೋಗಿ, ಮಲ್ಲೇಶ್, ಮೋಹನ್ ಇದ್ದರು.
ಅವಿರೋಧ ಆಯ್ಕೆ
ತಾಲ್ಲೂಕು ಸಾಧು ವೀರಶೈವ ಸಮಾಜದ ಗೌರವಾಧ್ಯಕ್ಷರಾಗಿ ತಾಲ್ಲೂಕಿನ ಮಾದನಬಾವಿ ಗ್ರಾಮದ ಹಿರಿಯ ಮುಖಂಡ ಎಂ.ಜಿ. ವೀರಪ್ಪಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಗು ಜನನ
ವಿಶೇಷ ದಿನ 12-12-2012ರ ಬುಧವಾರ ಮಧ್ಯಾಹ್ನ 1.30ಕ್ಕೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲ್ಲೂಕಿನ ಕೋಟೆಮಲ್ಲೂರು ತಾಂಡಾದ ಚೈತ್ರಾಬಾಯಿ ನಾಗೇಶ್ನಾಯ್ಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ತಾಯಿ- ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಶಿಬಿರ
ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಯಲ್ಲಿ ಡಿ. 14ರಿಂದ 31ರವರೆಗೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತ ಹೃದಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕಸ್ತೂರ ಬಾ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಹಿರಿಯ ವ್ಯವಸ್ಥಾಪಕ ಅನಿಲ್ ಪೌಲ್ ಜಾಕಬ್ ಹೇಳಿದರು.
ಇಸಿಜಿ, ಟ್ರೇಡ್ಮಿಲ್ ಸೇರಿದಂತೆ ಹೃದ್ರೋಗಕ್ಕೆ ಸಂಬಂಧಿಸಿದ ವಿವಿಧ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ತಪಾಸಣಾ ಶಿಬಿರದ ನಂತರ ದಾಖಲಾಗುವವರಿಗೆ ಒಳರೋಗಿ ವಿಭಾಗದ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುವುದು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಕಾರ್ಯ ನಿರ್ವಹಣಾಧಿಕಾರಿ ಅಭಿನಯ್ ಶರ್ಮಾ, ಮಣಿಪಾಲ್ ಆರೋಗ್ಯ ಕಾರ್ಡ್ ಪ್ರತಿನಿಧಿ ಶಿವಮೊಗ್ಗದ ಅ.ನಾ. ವಿಜಯೇಂದ್ರರಾವ್, ಹೊನ್ನಾಳಿ ಪ್ರತಿನಿಧಿ ಪುಟ್ಟಪ್ಪ, ಅಕ್ಷಯ್ ಭಂಡಿಗಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.