ಗದಗ: ಹಾವೇರಿ–ಗದಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆತ್ಕೆ ಕುರಿತು ಕರೆದಿದ್ದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಗದ್ದಲ ಉಂಟಾದ ಪರಿಣಾಮ ಸಭೆಯಿಂದ ಕೆಪಿಸಿಸಿ ವೀಕ್ಷಕರು ಹೊರ ನಡೆದ ಘಟನೆ ನಡೆಯಿತು.
ನಗರದ ಕಾಟನ್ ಸೇಲ್ ಸೊಸೈಟಿ ಸಭಾಂಗಣದಲ್ಲಿ ಶುಕ್ರವಾರ ವೀಕ್ಷಕರಾದ ವಿಧಾನ ಪರಿಷತ್ ಸದಸ್ಯ ಟಿ.ಜಾನ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕೆಪಿಸಿಸಿ ಸದಸ್ಯ ಆರ್.ರಘು ಅವರು ಅಭಿಪಾ್ರಯ ಸಂಗ್ರಹಿಸುವ ವೇಳೆ ಆಕಾಂಕ್ಷಿಗಳ ಪರವಾಗಿ ಕಾರ್ಯಕರ್ತರು, ಅಭಿಮಾನಿಗಳು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಒಂದೊಂದು ಗುಂಪು ಆಕಾಂಕ್ಷಿ ಪರವಾಗಿ ಜೈ ಕಾರ ಹಾಕಿತು.
ಮಾಜಿ ಶಾಸಕ ಡಿ.ಆರ್.ಪಾಟೀಲ ಅವರಿಗೆ ಟಿಕೆಟ್ ನೀಡಬೇಕು ಎಂದು ಒಂದು ಗುಂಪು ವಾದ ಮಂಡಿಸಿದರೆ, ಮತ್ತೊಂದು ಗುಂಪು ಯುವ ಮುಖಂಡ ಸಲೀಂ ಅಹಮದ್ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿತು. ಇದರ ನಡುವೆ ಮಾಜಿ ಸಂಸದ ಪೊ್ರ. ಐ.ಜಿ.ಸನದಿ, ಮಾಜಿ ಶಾಸಕ ಜಿ.ಎಸ್.ಗಡ್ಡದೇವರ ಮಠ ಅವರಿಗೂ ಟಿಕೆಟ್ ನೀಡಬೇಕು ಎಂದು ಕೆಲವರು ಒತ್ತಾಯಿಸಿದರು.
ಗದಗ ಮತ ಕ್ಷೇತ್ರದ ಕಾರ್ಯಕರ್ತರು ಡಿ.ಆರ್.ಪಾಟೀಲ, ಸಲೀಂ ಅಹಮದ್, ಐ.ಜಿ.ಸನದಿ, ರೋಣ ಕ್ಷೇತ್ರದಿಂದ ಐ.ಎಸ್.ಪಾಟೀಲ ಹಾಗೂ ಶಿರಹಟ್ಟಿ ಕ್ಷೇತ್ರದ ಕಾರ್ಯಕರ್ತರು ಗಡ್ಡದೇವರ ಮಠ, ಸಲೀಂ ಅಹಮದ್ ಅವರ ಹೆಸರು ಪ್ರಸ್ತಾಪಿಸಿದರು.
ವೀಕ್ಷಕರೊಂದಿಗೆ ಆಗಮಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಗದಗ ಉಸ್ತುವಾರಿ ಹೊತ್ತಿರುವ ಹನುಮಂತಯ್ಯ ಅವರು, ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಗದ್ದಲ ಹೆಚ್ಚಾಗಿ ಕಾರ್ಯಕರ್ತರು ವೀಕ್ಷಕರು ಕುಳಿತಿದ್ದ ಸ್ಥಳಕ್ಕೆ ತೆರಳಿ ನಮ್ಮ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದರು. ಅದೇ ಸಂದರ್ಭದಲ್ಲಿ ಮತ್ತೊಂದು ಗುಂಪು ಘೋಷಣೆ ಕೂಗಲು ಆರಂಭಿಸಿತು. ಒಂದು ಹಂತದಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ಗೊತ್ತಾಗಲಿಲ್ಲ. ಗದ್ದಲದ ವಾತಾವರಣ ಉಂಟಾಯಿತು.
’ಎಲ್ಲ ತಾಲೂಕಿನವರಿಗೂ ಅವಕಾಶ ನೀಡಲಾಗುವುದು. ಯಾರು ಪರವಾಗಿಯೂ ಘೋಷಣೆಗಳನ್ನು ಕೂಗಬಾರದು. ತಾಳ್ಮೆಯಿಂದ ವರ್ತಿಸುವಂತೆ’ ವೀಕ್ಷಕರು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಗದ್ದಲ ಹೆಚ್ಚಾಗುತ್ತಿದ್ದಂತೆ ವೀಕ್ಷಕರು ಸಭಾಂಗಣದಿಂದ ಹೊರ ನಡೆಯಲು ಮುಂದಾದರು. ಆಗ ವೀಕ್ಷಕರನ್ನು ಸುತ್ತುವರಿದ ಕಾರ್ಯಕರ್ತರು ತಮ್ಮ ಕ್ಷೇತ್ರದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರು.
ಸಭಾಂಗಣದಿಂದ ಹೊರ ಬಂದ ಬಳಿಕ ವೀಕ್ಷಕರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದರು.
ಕೆಲ ಸಂಘ ಸಂಸ್ಥೆಗಳು ಅಭ್ಯರ್ಥಿ ಪರವಾಗಿ ಲಿಖಿತ ಮನವಿ ಸಲ್ಲಿಸಿದರೆ, ಮತ್ತೆ ಕೆಲವರು ವೈಯಕ್ತಿಕವಾಗಿಯೂ ವೀಕ್ಷಕರರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದರು. ಈ ನಡುವೆ ಪತ್ರಿಕಾಗೋಷ್ಠಿ ನಡೆಯುತ್ತಿರುವಾಗಲೇ ಮಧ್ಯ ಪ್ರವೇಶಿಸಿದ ಗದಗ ಬೆಟಗೇರಿ ನಗರಸಭೆ ಸದಸ್ಯರು, ಡಿ.ಆರ್.ಪಾಟೀಲ ಅವರಿಗೆ ಟಿಕೆಟ್ ನೀಡಬೇಕು ಎಂದು ಮನವಿ ಸಲ್ಲಿಸಿದರು. ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಟಿ.ಈಶ್ವರ, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಸಹ ಪ್ರತ್ಯೇಕ ವಾಗಿ ವೀಕ್ಷಕರನ್ನು ಭೇಟಿ ಮಾಡಿದರು. ರವಿ ದಂಡಿನ ಕೂಡಾ ಪ್ರಬಲ ಆಕಾಂಕ್ಷಿ ಯಾಗಿದ್ದಾರೆ. ಸಂಜೆವರೆಗೂ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹ ಮಾಡಲಾಯಿತು.
ಸುದ್ದಗಾರರ ಜತೆ ಮಾತನಾಡಿದ ವೀಕ್ಷಕ ಆರ್.ರಘು, ಅಭ್ಯರ್ಥಿ ಆಯ್ಕೆಗೂ ಮುನ್ನ ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ಮೂರು ಅಥವಾ ಐದು ಮಂದಿ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ಆಯ್ಕೆ ನಿರ್ಧಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.