ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನ್ ಸ್ಟುಡಿಯೊದಲ್ಲಿ ಸ್ಮಾರಕ

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಗರದ ಅಭಿಮಾನ್ ಸ್ಟುಡಿಯೊವನ್ನು ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದ್ದರೂ ಇನ್ನೂ ಕಾರ್ಯಗತಗೊಂಡಿಲ್ಲ. ಅಲ್ಲದೇ ಸರ್ಜಾಪುರ-ಕೆಂಗೇರಿ ಮಧ್ಯೆ ಇರುವ ರಸ್ತೆಗೆ ವಿಷ್ಣು ಅವರ ಹೆಸರನ್ನೇ ನಾಮಕರಣ ಮಾಡಲಾಗುವುದು ಎಂದು ಸಂಸದ ಅನಂತಕುಮಾರ್ ಅವರು ವರ್ಷದ ಹಿಂದೆ ನೀಡಿದ್ದ ಭರವಸೆಯೂ ಇನ್ನೂ ಈಡೇರಿಲ್ಲ~ ಎಂದು ವಿಷ್ಣುವರ್ಧನ್ ಅವರ ಅಳಿಯ, ಚಿತ್ರನಟ ಅನಿರುದ್ಧ್ ಬೇಸರ ವ್ಯಕ್ತಪಡಿಸಿದರು.

ದಿವಂಗತ ವಿಷ್ಣುವರ್ಧನ್ ಅವರ ಜನ್ಮದಿನದ ಅಂಗವಾಗಿ `ರಂಗಜಂಗಮ ಕಲಾನಿಕೇತನ ಟ್ರಸ್ಟ್~ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಅವರ ಚಲನಚಿತ್ರಗಳ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, `ವಿಷ್ಣುವರ್ಧನ್ ಹೆಸರಿನಲ್ಲಿ ನಡೆಯಬೇಕಿದ್ದ ಈ ಕಾರ್ಯಗಳನ್ನು ಬೇರೆ ರಾಜ್ಯದವರು ಕೇಳಿದಾಗ, ವಾಸ್ತವ ಸ್ಥಿತಿಯನ್ನು ಹೇಳಲು ನಮಗೆ ಮುಜುಗರವಾಗುತ್ತದೆ. ಆದರೂ ರಾಜ್ಯದ ಮರ್ಯಾದೆ ಉಳಿಸುವ ಉದ್ದೇಶದಿಂದ ಕೆಲಸ ನಡೆಯುತ್ತಿದೆ ಎಂದೇ ಹೇಳುತ್ತೇವೆ~ ಎಂದರು.

`ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್ ಮಾದರಿಯಲ್ಲಿ ಬೆಂಗಳೂರಿನಲ್ಲೂ ಕೇಂದ್ರವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಒಪ್ಪಿದೆ. ಅದಕ್ಕೆ ವಿಷ್ಣುವರ್ಧನ್ ಅವರ ಹೆಸರನ್ನು ನಾಮಕರಣ ಮಾಡಬೇಕು~ ಎಂದು ಮನವಿ ಮಾಡಿದರು.

`ಫಿಲ್ಮ್ ಇನ್‌ಸ್ಟಿಟ್ಯೂಟ್ ಸ್ಥಾಪನೆಗೆ ಸಂಬಂಧಿಸಿದಂತೆ ಕೇಂದ್ರವು ರಾಜ್ಯದೊಂದಿಗೆ ಪತ್ರ ವ್ಯವಹಾರ ನಡೆದಿದೆ. ರಾಜ್ಯ ಸರ್ಕಾರವೂ ಆ ಕೇಂದ್ರದ ಸ್ಥಾಪನೆಗೆ ಜಾಗ ನೀಡಲು ಒಪ್ಪಿಕೊಂಡಿದೆ. ಆದರೂ ಸಹ ಎಲ್ಲೋ ಒಂದು ಕಡೆ ವಿಳಂಬವಾಗಿ, ಈ ಯೋಜನೆ ಕಾರ್ಯರೂಪಕ್ಕೆ ಬರುತ್ತಿಲ್ಲ~ ಎಂದರು.

ಹಿರಿಯ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, `ನನ್ನ ನಿರ್ದೇಶನದ ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದಲ್ಲಿ ವಿಷ್ಣುವರ್ಧನ್ ಅವರು ಅಭಿಯನಯಿಸಲು ಒಪ್ಪಿಕೊಂಡಾಗ, ಅವರ ನನ್ನ ಹೊಂದಾಣಿಕೆಯ ಬಗ್ಗೆ ಹಲವಾರು ಗೆಳೆಯರು ಆತಂಕ ವ್ಯಕ್ತಪಡಿಸಿದ್ದರು. ಅವರು ದೈವಭಕ್ತರಾಗಿದ್ದರೆ, ನಾನು ನಾಸ್ತಿಕ. ಆದರೆ ಈ ಅಭಿಪ್ರಾಯಭೇದ ಎಂದಿಗೂ ನಮ್ಮಿಬ್ಬರಲ್ಲಿ ಸುಳಿಯಲಿಲ್ಲ.

ಈ ಚಿತ್ರ ಪೂರ್ತಿಯಾಗುವವರೆಗೂ ಒಂದೇ ಒಂದು ಚಿಕ್ಕ ಭಿನ್ನಾಭಿಪ್ರಾಯವೂ ಬರಲಿಲ್ಲ. ಅತ್ಯಂತ ತಾದಾತ್ಮ್ಯದಿಂದ ಕಥೆಯನ್ನು ಕೇಳಿ ಚಿತ್ರದಲ್ಲಿ ಅಭಿಯನಯಿಸಲು ಅವರು ಒಪ್ಪಿಗೆ ಸೂಚಿಸಿದ್ದರು~ ಎಂದು ಸ್ಮರಿಸಿದರು.

`ವಿಷ್ಣುವರ್ಧನ್ ದಿನಪತ್ರಿಕೆಗಳನ್ನು ತಮ್ಮ ಮುಂದೆ ಹರವಿಕೊಂಡು ಓದಿ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚಿಸುತ್ತಿದ್ದರು. ನನ್ನೊಂದಿಗೆ ನಾಗತಿಹಳ್ಳಿಗೆ ಬಂದು ಗ್ರಾಮಸ್ಥರೊಂದಿಗೆ ಬೆರೆತಿದ್ದರು. ಅಂಬರೀಶ್ ಮತ್ತು ಅವರ ಸ್ನೇಹ ಎಲ್ಲರಿಗೂ ಮಾದರಿಯಾಗುವಂಥದ್ದು~ ಎಂದು ಶ್ಲಾಘಿಸಿದರು.

ಹಾಸ್ಯ ಕಲಾವಿದ ಕೃಷ್ಣೇಗೌಡ, ಚಿತ್ರ ನಿರ್ಮಾಪಕ ವಿಜಯಕುಮಾರ್, ಚಿತ್ರನಟ ಶಿವಧ್ವಜ್, ರಂಗಜಂಗಮ ಕಲಾನಿಕೇತನ ಟ್ರಸ್ಟ್‌ನ ಅಧ್ಯಕ್ಷ ಮೇಕಪ್ ಕೃಷ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT