ಬಾಗಲಕೋಟೆ: ಬಾಗಲಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ರೂ.1.63 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಎಪಿಎಂಸಿ ಕ್ರಾಸ್ನಲ್ಲಿ ಮುಖ್ಯ ದ್ವಾರಕ್ಕೆ ಆರ್ಚ್ ಗೇಟ್ ನಿರ್ಮಾಣ ಕಾಮಗಾರಿಗೆ ಮತ್ತು ಕೇಸನೂರು ಮಾರುಕಟ್ಟೆಯಲ್ಲಿ ಹಮಾಲರ ವಸತಿ ಗೃಹಗಳ ಸಮುಚ್ಛಾಯಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ, ನಷ್ಟದಲ್ಲದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಭಿವೃದ್ಧಿಯತ್ತ ಕೊಂಡಯ್ಯಲಾಗಿದೆ ಎಂದು ತಿಳಿಸಿದರು.
ಮುಳುಗಡೆ ಸಮಸ್ಯೆ ಇದ್ದರೂ ವ್ಯಾಪಾರಸ್ಥರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಾಗಲಕೋಟೆ ತಾಲ್ಲೂಕಿನ ಸುತ್ತಮುತ್ತಲಿನ ರೈತರು ಮೆಕ್ಕೆಜೋಳ ಮತ್ತಿತರ ಬೆಳೆಗಳನ್ನು ಬೆಳೆದು ಕೃಷಿ ಉತ್ಪನ್ನ ಮಾರುಕಟ್ಟೆಗೆ ತರುತ್ತಿದ್ದಾರೆ. ಸಂಗ್ರಹ ಮಾಡಿಕೊಳ್ಳಲು ಲಕ್ಷಾಂತರ ರೂಪಾಯಿ ವೆಚ್ಚದ ಗೋದಾಮುಗಳನ್ನು ನಿರ್ಮಿಸಲಾಗಿದೆ ಎಂದರು.
ಚರಂತಿಮಠದ ಪ್ರಭುಸ್ವಾಮೀಜಿ, ಟೀಕಿನಮಠದ ರೇವಣಸಿದ್ದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಪ್ರಭುಸ್ವಾಮಿ ಸರಗಣಾಚಾರಿ, ಉಪಾಧ್ಯಕ್ಷ ಎಸ್.ಎಂ.ಹರಗಬಲ್ಲ, ನಗರಸಭೆ ಅಧ್ಯಕ್ಷೆ ಭೀಮವ್ವ ವಡ್ಡರ ಮತ್ತಿತರರು ಉಪಸ್ಥಿತರಿದ್ದರು.