ಚಾಮರಾಜನಗರ: ಮಾದಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಕಾಮಗಾರಿಗಳನ್ನು ನಿರ್ವಹಿಸಲು ಬಿಡುಗಡೆಯಾಗಿರುವ 14.50 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಜಿ.ಪಂ.ಸದಸ್ಯೆ ನಾಗಶ್ರೀಪ್ರತಾಪ್ ಶನಿವಾರ ಗುದ್ದಲಿಪೂಜೆ ನೆರವೇರಿಸಿದರು.
ತಾಲೂಕಿನ ಮೇಲಾಜಿಪುರದಿಂದ ಬದನಗುಪ್ಪೆ ಮಾರ್ಗದ ರಸ್ತೆ ಅಭಿವೃದ್ದಿಗೆ 3 ಲಕ್ಷ ರೂ, ಶಿವಪುರ- ಕಾಳನಹುಂಡಿಗೆ ಮಾರ್ಗದ ರಸ್ತೆ ಅಭಿವೃದ್ದಿ 2 ಲಕ್ಷ ರೂ, ಮಸಗಾಪುರ- ಕಾಡಹಳ್ಳಿ ಮಾರ್ಗದ ರಸ್ತೆ ಅಭಿವೃದ್ದಿಗೆ 2 ಲಕ್ಷ ರೂ, ನಂಜೇದೇವನಪುರ- ತಮ್ಮಡಹಳ್ಳಿ ಮಾರ್ಗದ ರಸ್ತೆ ಅಭಿವೃದ್ದಿಗೆ 1 ಲಕ್ಷ ರೂ, ಮಂಗಲ- ಮಂಗಲಹೊಸೂರು ಮಾರ್ಗ ಶಂಕರದೇವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ 3 ಲಕ್ಷ ರೂ ನೀಡಲಾಗಿದೆ ಎಂದು ತಿಳಿಸಿದರು.
ಕಸ್ತೂರು ಮುಖ್ಯ ರಸ್ತೆಯಿಂದ ಆನಹಳ್ಳಿಯಿಂದ ಪುಟ್ಟೇಗೌಡನಹುಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ 2 ಲಕ್ಷ ರೂ, ಮರಿಯಾಲದಿಂದ ಶಿವಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ 1.50 ಲಕ್ಷ ರೂ.ಗಳನ್ನು ಬಿಡುಗಡೆಯಾಗಿದ್ದು ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಮೇಲಾಜಿಪುರದ ಮಠದ ಮಹಂತಾಸ್ವಾಮೀಜಿ, ಗ್ರಾ.ಪಂ.ಅಧ್ಯಕ್ಷ ಅಬ್ದುಲ್ಗಫಾರ್, ಮಾಜಿ ಅಧ್ಯಕ್ಷ ಬಸವಣ್ಣ, ಸದಸ್ಯರಾದ ಮಲ್ಲಿಗಮ್ಮ, ರಾಚಶೆಟ್ಟಿ, ಮುಖಂಡರಾದ ಸುಬ್ಬಪ್ಪ, ಶಾಂತಪ್ಪ, ನಾಗಣ್ಣ, ರಾಜೇಂದ್ರ, ಪುಟ್ಟಸ್ವಾಮಪ್ಪ, ಲಿಂಗರಾಜು ಇತರರು ಹಾಜರಿದ್ದರು.