ರೋಣ: ದೇಶಕ್ಕೆ ಸ್ವಾತಂತ್ರ್ಯ ಬಂದು 60ವರ್ಷಗಳು ಕಳೆದರೂ ದೇಶ ಅಭಿವೃದ್ಧಿಯಾಗಿಲ್ಲ. ಆದರೆ ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳು ಮಾತ್ರ ಅಭಿವೃದ್ಧಿಯಾಗಿದ್ದಾರೆ ಎಂದು ಕರ್ನಾಟಕ ಮಕ್ಕಳ ಪಕ್ಷದ ಸಂಸ್ಥಾಪಕ ಅಶೋಕ ಖೇಣಿ ಹೇಳಿದರು.
ಪಟ್ಟಣದ ಅಮರೇಶ್ವರ ಆಯಿಲ್ ಮಿಲ್ನಲ್ಲಿ ಪಕ್ಷದ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳು ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನ ನೀಡಿಲ್ಲ. ತಗ್ಗು ದಿಣ್ಣೆಗಳಿಂದ ಕೂಡಿರುವ ರಸ್ತೆಗಳು, ಗ್ರಾಮೀಣ ಭಾಗದಲ್ಲಿ ಅಶುದ್ಧ ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ಸಿಗದಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಮಕ್ಕಳು ದೇವರ ಸಮಾನ. ಅವರು ಯಾವ ರೀತಿಯಿಂದಲೂ ಸುಳ್ಳು ಹೇಳ ಲಾರರು. ಈ ಉದ್ದೇಶದಿಂದಲೇ ಮಕ್ಕಳ ಪಕ್ಷವನ್ನು ಸ್ಥಾಪಿಸಲಾಗಿದೆ. ಇದಕ್ಕೆ ರಾಜ್ಯದ ಜನರ ಆರ್ಶೀವಾದ ಬೇಕು. ರಾಜ್ಯದ ಜನರು ಸುಖ ಸಂತೊಷದಿಂದ ಬಾಳಬೇಕು ಎನ್ನುವ ಉದ್ದೇಶವನ್ನು ಪಕ್ಷ ಹೊಂದಿದೆ ಎಂದು ತಿಳಿಸಿದರು.
ಇಂದಿನ ಸರ್ಕಾರಗಳು ಯೋಜನೆ ರೂಪಿಸುವಾಗ ಉದ್ಯೋಗದ ಕಡೆಗೆ ಗಮನ ಕೊಡದೇ ಕೇವಲ ಮತ ದಾರರನ್ನು ಓಲೈಸುವ ಯೋಜನೆ ರೂಪಿಸಿದ್ದಾರೆ. ಇಂಥ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಯಾಗಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಜೆಡಿಎಸ್ ಪಕ್ಷದ ಮುಖ್ಯ ಗುರಿ ದೇವೆಗೌಡರ ಮಕ್ಕಳು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎನ್ನುವ ಉದ್ದೇಶ. ಕುಮಾರಸ್ವಾಮಿ ಕೇವಲ 20ತಿಂಗಳ ಅಧಿಕಾರ ಅವಧಿಯಲ್ಲಿ 60 ಕೋಟಿ ಗಳಿಸಿದರು. ರೇವಣ್ಣ1ಕೋಟಿ ಇದ್ದ ಆಸ್ತಿ 20 ತಿಂಗಳ ಅವಧಿಯಲ್ಲಿ 101 ಕೋಟಿ ಆಯಿತು.
ಇದು ಬಡವರ ಬೆವರಿನ ಶ್ರಮದ ಹಣ. ಇದು ಅವರ ನಾಶಕ್ಕೆ ಕಾರಣವಾಗುತ್ತದೆ ಎಂದು ಗಂಭೀರ ಆರೋಪ ಮಾಡಿದರು.ಯಡಿಯೂರಪ್ಪ ಪಕ್ಷ ಬಿಟ್ಟಿದ್ದು ತಾನು ಮತ್ತೆ ಮುಖ್ಯಮಂತ್ರಿ ಯಾಗ ಬೇಕು ಎನ್ನುವ ಏಕೈಕ ಉದ್ದೇಶ ದಿಂದ. ಅವರಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ ಎಂದು ಟೀಕಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಅಮರೇಶ ಬೂದಿಹಾಳ ಮಾತನಾಡಿ, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರು ಎಂದು ಭವಿಷ್ಯ ನುಡಿದರು. ರಾಜ್ಯ ಘಟಕದ ಅಧ್ಯಕ್ಷ ನಾಗೇಂದ್ರ ಪ್ರಸಾದ್, ನಿಂಗಪ್ಪ ಪಡಗದ, ಡಾ.ಆರ್.ಜೆ ಮಲ್ಲಾಪುರ, ವೀರಣ್ಣ ಕರಿಬಿಷ್ಠಿ, ಧರಣೆಪ್ಪಗೌಡ್ರ, ಶೌಕತಲಿ ಪೆಂಡಾರಿ, ಶಾಂತೇಶಗೌಡ ಧರೆಣೆಪ್ಪ ಗೌಡ್ರ, ಲಕ್ಷ್ಮಣ ಹಳ್ಳಿಕೇರಿ, ನಾಗರಾಜ ಹೊಸಮನಿ, ಬಸವರಾಜ ಕುರಿ, ಉಪಸ್ಥಿ ತರಿದ್ದರು. ಎಸ್.ವಿ.ನೇಗಲಿ ಸ್ವಾಗತಿಸಿ ದರು. ಬಸವರಾಜ ಬೂದಿಹಾಳ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.