ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕೆಲಸ ಶೂನ್ಯ: ಜೆಡಿಎಸ್ ಆಕ್ರೋಶ

Last Updated 5 ಜುಲೈ 2012, 5:20 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:  ನಗರಸಭೆಯಲ್ಲಿ ಅರಾಜಕತೆ ತಾಂಡವವಾಡುತ್ತಿದ್ದು ಇಡೀ ನಗರ ಗುಂಡಿ ಗಟಾರಗಳ ಆಗರವಾಗಿದೆ. ಆದರೆ ಶಾಸಕರು ಮತ್ತು ಸಂಸದರ ಬೆಂಬಲಿಗರು ಮಾತ್ರ ದೊಡ್ಡಬಳ್ಳಾಪುರದ ಅಭಿವೃದ್ಧಿಗೆ ಕೋಟಿ ಕೋಟಿ ರೂಪಾಯಿಗಳನ್ನು ತಂದಿರುವುದಾಗಿ ಡಂಗೂರ ಸಾರುತ್ತಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ತಾಲ್ಲೂಕು ಮಾಜಿ ಅಧ್ಯಕ್ಷ ಆಂಜನಗೌಡ ಲೇವಡಿ ಮಾಡಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಭ್ರಷ್ಟಾಚಾರ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಸೋಮವಾರ ನಗರದಲ್ಲಿ ಜೆಡಿಎಸ್ ವತಿಯಿಂದ ನಡೆದ ಬೃಹತ್ ಪ್ರತಿಭಟನಾ ವೇಳೆ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಸಂಸತ್ ಸದಸ್ಯರು ಮತ್ತು ಶಾಸಕರು ತಮ್ಮ ಮೂರು ವರ್ಷಗಳ ಆಡಳಿತದಲ್ಲಿ ಶಾಶ್ವತವಾಗಿ ಉಳಿಯುವ ಯಾವುದೇ ಕೆಲಸಗಳನ್ನು ಮಾಡಿಲ್ಲ. ಮಾಡಿಸಿಯೂ ಇಲ್ಲ. ಕನಿಷ್ಠ ಕುಡಿಯುವ ನೀರನ್ನು ಕೊಡಲೂ ಇವರು  ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಡಳಿತದಿಂದಾಗಿ ಇಡೀ ನಗರದ ರಸ್ತೆಗಳೆಲ್ಲ ಗುಂಡಿಗಳು ಬಿದ್ದು ಜನ ದೂಳು ತುಂಬಿದ ರಸ್ತೆಗಳಲ್ಲೇ ನಡೆದಾಡುವಂತಾಗಿದೆ ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ನೀಡಿದ್ದ ಭರವಸೆ ಸುಳ್ಳಾಗಿದ್ದು ಅವರನ್ನು ವಂಚಿಸುತ್ತಿವೆ ಎಂದು ಅವರು ದೂರಿದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಆರ್.ಗೋವಿಂದರಾಜ್ ಮಾತನಾಡಿ, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಜನ ಸಾಮಾನ್ಯರ ಕಷ್ಟಗಳನ್ನು ಕೇಳುವವರು ಇಲ್ಲದಂತಾಗಿದೆ ಎಂದರು.

ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಸಕಾಲ ಯೋಜನೆ ಸಾರ್ವಜನಿಕರ ಪಾಲಿಗೆ ಇನ್ನೂ ಮರೀಚಿಕೆಯಾಗೇ ಉಳಿದಿದೆ. ಬಿಜೆಪಿಯ ಆಡಳಿತದ ಘೋಷಣೆಗಳು ಕೇವಲ ಜನರನ್ನು ಮೆಚ್ಚುಸುವ ಸಲುವಾಗಿವೆಯೇ ಹೊರತು ಯಾವುವೂ ಸಾಕಾರವಾಗಿಲ್ಲ ಎಂದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಅವರನ್ನು ಹರಗಣಗಳಲ್ಲಿ ಸಿಲುಕಿಸಲು ಆಡಳಿತ ಪಕ್ಷದವರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಜೆಡಿಎಸ್ ಅಧಿಕಾರ ಅವಧಿಯಲ್ಲಿ ಹಗರಣಗಳು ನಡೆಯಲು ಅವಕಾಶ ನೀಡಿದ್ದರೆ ಕುಮಾರಸ್ವಾಮಿ ಅವರು ಮತ್ತಷ್ಟು ದಿನ ಮುಖ್ಯಮಂತ್ರಿಗಳಾಗಿ ಮುಂದುರೆಯುತ್ತಿದ್ದರು. ಬಿಜೆಪಿ ನಾಯಕರುಗಳ  ಎಲ್ಲಾ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದೇ ಆಡಳಿತ ನಡೆಸಲು ಅವಕಾಶ ದೊರೆಯದೇ ಹೋಗಲು ಕಾರಣವಾಗಿದೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ನರಸಿಂಹಯ್ಯ, ತಾ.ಪಂ.ಸದಸ್ಯ ಡಾ.ಎಚ್.ಜಿ.ವಿಜಯ್‌ಕುಮಾರ್, ದೀಪಾ ಕೃಷ್ಣಮೂರ್ತಿ, ಜೆಡಿಎಸ್ ಮುಖಂಡರಾದ ಚಿಕ್ಕರಾಮಕೃಷ್ಣಪ್ಪ, ಜೆಡಿಎಸ್ ತಾಲ್ಲೂಕು ಮಹಾ ಪ್ರಧಾನ ಕಾರ್ಯದರ್ಶಿ ಪುಟ್ಟ ಬಸವರಾಜು, ಜೆಡಿಎಸ್ ಸಾಸಲು ಹೋಬಳಿ ಘಟಕದ ಅಧ್ಯಕ್ಷ ನಾಗಣ್ಣ, ಕಸಬಾ ಹೋಬಳಿ ಅಧ್ಯಕ್ಷ ಶಿವಣ್ಣ, ದೊಡ್ಡಬೆಳವಂಗಲ ಹೋಬಳಿ ಅಧ್ಯಕ್ಷ ರಾಜಣ್ಣ, ನಗರಸಭೆ ಸದಸ್ಯೆ ಶಂಸುನ್ನಿಸಾ, ಜೆಡಿಎಸ್ ಯುವ ಘಟಕದ ತಾಲ್ಲೂಕು ಅಧ್ಯಕ್ಷ  ಅಂಚರಹಳ್ಳಿ ಆನಂದ್, ಯುವ ಘಟಕದ ಮುಖಂಡರಾದ ಜಗನ್ನಾಥಾಚಾರ್, ಬಿ.ವಿ.ಲೋಕೇಶ್, ಕೆಂಪರಾಜ್, ಅಲ್ಪಸಂಖ್ಯಾತರ ಘಟಕದ ರಹೀಮ್ ಮತ್ತಿತರರು  ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT