ಉಡುಪಿ: ಗ್ರಾಮೀಣ ಜನತೆಯ ಬದುಕಿನ ದಾರಿಯನ್ನು ಉತ್ತಮ ಪಡಿಸಲು ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದು ಕಾರ್ಕಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯರಾಮ ಸಾಲಿಯಾನ ಹೇಳಿದರು.
ಮಣಿಪಾಲದ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕಾರ್ಕಳ ತಾಲ್ಲೂಕು ಪಂಚಾಯಿತಿಯವರು ಆಯ್ಕೆ ಮಾಡಿದ 2012-13ರ ಸಾಲಿನ ಸ್ವರ್ಣಜಯಂತಿ ಸ್ವರೋಜ್ಗಾರ್ ಯೋಜನೆಯ ಫಲಾನುಭವಿ ಸ್ವ ಸಹಾಯ ಗುಂಪುಗಳ ಸದಸ್ಯರುಗಳಿಗೆ ಇತ್ತೀಚೆಗೆ ಏರ್ಪಡಿಸಿದ್ದ ಉದ್ಯಮಶೀಲತಾ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಶಿಸ್ತಿನಿಂದ ಪಡೆದ ತರಬೇತಿ ಜೀವನದ ಗುರಿ ಸಾಧಿಸಲು ಭದ್ರವಾದ ಬುನಾದಿ ಒದಗಿಸಿ ಕೊಡುತ್ತದೆ ಎಂದು ತಿಳಿಸಿದರು. ಉದ್ಯಮದ ಯಶಸ್ವಿ ನಿರ್ವಹಣೆಗೆ ತರಬೇತಿಯ ಅಗತ್ಯವಿದ್ದು, ಇಲ್ಲಿ ಪಡೆದಿರುವ ತರಬೇತಿಯಿಂದ ಪ್ರೇರಣೆ ಪಡೆದು ಉದ್ಯಮದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಿ ಎಂದು ಕಾರ್ಕಳ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ಕುಮಾರ ಹೇಳಿದರು.
ಕಾರ್ಕಳ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಮತಾ ನಾಯಕ್ ಹಾಗೂ ಸುಗುಣಾ ಸುವರ್ಣರವರು ಇದ್ದರು. ಸಂಸ್ಥೆಯ ನಿರ್ದೇಶಕ ಮಂಜುನಾಥ ಉಪಾದ್ಯ ಸ್ವಾಗತಿಸಿದರು.