ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಅಂಕಿಅಂಶಗಳೇ ಆಧಾರ

Last Updated 7 ಸೆಪ್ಟೆಂಬರ್ 2011, 9:55 IST
ಅಕ್ಷರ ಗಾತ್ರ

ಮಂಡ್ಯ: ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಲ್ಲಿ ಅಂಕಿ ಅಂಶಗಳು ಮಹತ್ವದ ಪಾತ್ರವಹಿಸುತ್ತದೆ. ಹೀಗಾಗಿ, ನಿಗದಿತ ಕಾಲಮಿತಿಯೊಳಗೆ ನಿಖರವಾದ ಮಾಹಿತಿಯನ್ನು ಕ್ರೋಡೀಕರಿಸಲು ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜಿ. ಜಯರಾಂ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಸಾಂಖ್ಯಿಕ ವ್ಯವಸ್ಥೆ ಅಭಿವೃದ್ಧಿ ಸಂಸ್ಥೆ, ಜಿಪಂ ಸಹಭಾಗಿತ್ವದಲ್ಲಿ ಜಿಲ್ಲಾ ಆದಾಯ ಅಂದಾಜು, ಬೆಲೆ ಸೂಚ್ಯಾಂಕ, ಸ್ಥಳೀಯ ಸಂಸ್ಥೆಗಳ ಅಂಕಿ-ಅಂಶಗಳ ಕ್ರೋಡೀಕರಣದ ಬಗ್ಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಅರ್ಥ ವ್ಯವಸ್ಥೆಯ ಬೆಳವಣಿಗೆಯನ್ನು ಅಳೆಯಲು ಅಂಕಿ ಅಂಶಗಳು ಪ್ರಮುಖ ಮಾನದಂಡ ಆಗಿರುವುದರಿಂದ, ಸ್ಥಳೀಯವಾಗಿ ಲಭ್ಯವಿರುವ ಮಾಹಿತಿ ಬಳಸಿಕೊಂಡು ಜಿಲ್ಲಾ ಆದಾಯ ಅಂದಾಜುಗಳನ್ನು ಸೂಕ್ತ ರೀತಿಯಲ್ಲಿ ತಯಾರಿಸಬಹುದಾಗಿದೆ ಎಂದು ಹೇಳಿದರು.

ಕೃಷಿ, ಅರಣ್ಯ, ಮೀನುಗಾರಿಕೆ, ಗಣಿಗಾರಿಕೆ ಸೇರಿದಂತೆ ವಿವಿಧ ವಲಯ ಗಳ ಕೊಡುಗೆಯು ಜಿಲ್ಲಾದಾಯಕ್ಕಿದೆ. ಇದರ ಆಧಾರದಲ್ಲೇ ಅಭಿವೃದ್ಧಿ ಯೋಜನೆ ರೂಪಿಸಲು ಸಾಧ್ಯ. ಆದರೆ, ಈ ಕ್ಷೇತ್ರಗಳ ಸಾಮರ್ಥ್ಯವನ್ನು ಸ್ಪಷ್ಟವಾಗಿ ಅರಿಯಲು ವಿಫಲರಾಗಿದ್ದೇವೆ ಎಂದು ಹೇಳಿದರು.

ವೈಫಲ್ಯಕ್ಕೆ ವೈಜ್ಞಾನಿಕ ಚರ್ಚೆ ನಡೆಸಬೇಕು. ಪ್ರಗತಿ ಮತ್ತು ತೊಡಕುಗಳನ್ನು ವಿಶ್ಲೇಷಣಾತ್ಮಕವಾಗಿ ಅಧ್ಯಾಯನ ಮಾಡಬೇಕು. ಈ ಕುರಿತ ಲಭ್ಯ ವರದಿಗಳು, ಸಮೀಕ್ಷೆಗಳ ಮಾಹಿತಿ ಇದ್ದರೂ, ತಿಳಿದುಕೊಳ್ಳುವ ಪ್ರಯತ್ನವಾಗುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ದೃಷ್ಟಿಕೋನವನ್ನು ಬದಲಾಯಿಸಿ ಕೊಳ್ಳಬೇಕು ಎಂದು ಸಲಹೆ   ನೀಡಿದರು.

ಅಂಕಿ ಅಂಶಗಳನ್ನು ಸರಿಯಾಗಿ ಅಂದಾಜು ಮಾಡುವಲ್ಲಿ ವಿಫಲವಾದರೆ ಅಸಮತೋಲನಕ್ಕೆ ಕಾರಣವಾಗುತ್ತದೆ. ತಾತ್ಕಾಲಿಕ ಪರಿಹಾರಕ್ಕಿಂತ, ಶಾಶ್ವತ ಪರಿಹಾರ ದೊರಕಿಸಲು ಆದ್ಯತೆ ನೀಡಬೇಕಿದ್ದು, ಅಧಿಕಾರಿಗಳು ತಮ್ಮ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ನಿರ್ದೇಶಕ ರಾಜಶೇಖರಪ್ಪ, ಯೋಜನಾ ನಿರ್ದೇಶಕ ಶಂಕರರಾಜು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕ ಶ್ರೀನಿವಾಸರಾವ್, ಜಿಪಂ ಮುಖ್ಯ ಯೋಜನಾಧಿಕಾರಿ ಕೆಂಡಗಣ್ಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT