ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಮುನ್ನುಡಿ ಬರೆಯುವ ಜನಗಣತಿ ಆರಂಭ

Last Updated 10 ಫೆಬ್ರುವರಿ 2011, 7:15 IST
ಅಕ್ಷರ ಗಾತ್ರ

ಅರಕಲಗೂಡು: ಶೀಘ್ರ ವಿಲೇವಾರಿ ನ್ಯಾಯಾಧೀಶ ಸಿ. ಹಾಲಪ್ಪ ಅವರ ಕುಟುಂಬದ ಮಾಹಿತಿ ಸಂಗ್ರಹಿಸುವ ಮೂಲಕ ಪಟ್ಟಣದಲ್ಲಿ ಜನಗಣತಿ ಕಾರ್ಯಕ್ಕೆ ಪ.ಪಂ. ಮುಖ್ಯಾಧಿಕಾರಿ ಸಿ. ವಾಸುದೇವ್ ಚಾಲನೆ ನೀಡಿದರು.ನಂತರ ಪ.ಪಂ. ಅಧ್ಯಕ್ಷೆ ಯಶೋಧಮ್ಮ, ಉಪಾಧ್ಯಕ್ಷ ಎ.ಪಿ. ರಮೇಶ್ ಅವರ ಮನೆಗಳಿಗೆ ತೆರಳಿ ಮಾಹಿತಿ ಪಡೆದು ಗಣತಿ ಕಾರ್ಯ ಆರಂಭಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಜಗೃತಿ ಜಾಥಾ ನಡೆಸಿ ಜನಗಣತಿ ಕುರಿತು ಅರಿವು ಮೂಡಿಸಿದರು.

ಮಲ್ಲಿಪಟ್ಟಣ: ತಾಲ್ಲೂಕಿನ ಮಲ್ಲಿಪಟ್ಟಣದಲ್ಲಿ ಪತ್ರಕರ್ತ ಎ.ವಿ. ಕೃಷ್ಣಮೂರ್ತಿಯವರ ಕುಟುಂಬದ ಮಾಹಿತಿ ಪಡೆಯುವ ಮೂಲಕ ಗಣತಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಜಾಗೃತಿ ಜಾಥಾ ನಡೆಸಿದರು. ಶಿರದನಹಳ್ಳಿ ಗ್ರಾಮದಲ್ಲಿ ಜಿ.ಪಂ. ಸದಸ್ಯೆ ನಾಗಮಣಿ ಗಣತಿ ಕಾರ್ಯಕ್ಕೆ ಚಾಲನೆ ನೀಡಿದರು. ಸಿ.ಡಿ.ಪಿ.ಓ. ಮಲ್ಲೇಗೌಡ,ರೆವಿನ್ಯೂ ಇನ್ಸ್ ಪೆಕ್ಟರ್ ರಂಗೇಗೌಡ, ಗ್ರಾ.ಪಂ. ಸದಸ್ಯ ಎಸ್.ಆರ್.ಸುಬ್ಬೇಗೌಡ ಇತರರು ಪಾಲ್ಗೊಂಡಿದ್ದರು.

ಅಭಿವೃದ್ಧಿಗೆ ಗಣತಿ ಸಹಕಾರ: ಧನಂಜಯ
ಜಾವಗಲ್: ಸರ್ಕಾರಗಳು ಜನಪರ ಯೋಜನೆ ಹಮ್ಮಿಕೊಳ್ಳುವಾಗ ಜನಗಣತಿ ಅಂಶಗಳೇ ಆಧಾರ. ಪ್ರತಿಯೊಬ್ಬ ನಾಗರಿಕರೂ ಸಹ ತಮ್ಮ ತಮ್ಮ ಮನೆಗೆ ಗಣತಿದಾರರು ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಯೊಂದು ಮಾಹಿತಿಯನ್ನು ಸರ್ಮಪಕವಾಗಿ ನೀಡಿ ಗ್ರಾಮಸ್ಥರು ಸಹಕರಿಸುವಂತೆ ಗ್ರಾ.ಪಂ.ಅಧ್ಯಕ್ಷ ಧನಂಜಯ ಕೋರಿದ್ದಾರೆ.

ಬುಧವಾರ ಜಾವಗಲ್‌ನಲ್ಲಿ ಗಣತಿ ಕಾರ್ಯಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದರು. ತಾ.ಪಂ. ಸದಸ್ಯೆ ಲಕ್ಷ್ಮೀರವಿಶಂಕರ್, ಹೋಬಳಿ ರಾಜಸ್ವ ನಿರೀಕ್ಷಕ ರಮೇಶ್, ಗ್ರಾಮಲೆಕ್ಕಿಗ ಕೃಷ್ಣಮೂರ್ತಿ, ಜನಗಣತಿಯ ಮೇಲ್ವಿಚಾರಕ ಶಿವಲಿಂಗಮೂರ್ತಿ ಹಾಗೂ ಎಲ್ಲಾ ಗಣತಿದಾರರು ಭಾಗವಹಿಸಿದ್ದರು.ಕಾರ್ಯಕ್ರಮಕ್ಕೆ ಮುದಲು ಮಾಜಿ ಉಪಮುಖ್ಯಮಂತ್ರಿ ಹಾಗು ಸಾಹಿತಿ ಎಂ.ಪಿ.ಪ್ರಕಾಶ್ ರವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಹೋರಾಟಗಾರರ ಮನೆಯಿಂದ ಗಣತಿಗೆ ಚಾಲನೆ
ರಾಮನಾಥಪುರ: ಪಟ್ಟಣದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಬಿ.ಡಿ. ಬಸವರಾಜಶೆಟ್ಟಿ ನಿವಾಸದಿಂದ ಬುಧವಾರ ತಹಶೀಲ್ದಾರ್ ಎಂ.ಕೆ. ಸವಿತ ಅವರು ಜನಗಣತಿ ಕಾರ್ಯಕ್ಕೆ ಚಾಲನೆ ನೀಡಿದರು.ಬಳಿಕ ತಹಶೀಲ್ದಾರ್ ಸವಿತಾ ಮಾತನಾಡಿ, ಮಾಹಿತಿ ಸಂಗ್ರಹಣೆಗಾಗಿ ಮನೆ ಬಾಗಿಲಿಗೆ ಬರುವ ಗಣತಿದಾರರಿಗೆ ಸಂಪೂರ್ಣ ವಿವರ ನೀಡುವ ಮೂಲಕ ಪ್ರತಿಯೊಬ್ಬರೂ ತಮ್ಮ ಹೆಸರು ನೋಂದಾಯಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಗ್ರಾ.ಪಂ. ಅಧ್ಯಕ್ಷ ಆರ್.ಎಸ್. ನರಸಿಂಹಮೂರ್ತಿ ಅಯ್ಯಂಗಾರ್ ನೇತೃತ್ವದಲ್ಲಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಜನಗಣತಿ ಮಹತ್ವ ಸಾರುವ ಭಿತ್ತಿ ಪತ್ರ ಹಿಡಿದು ಪಟ್ಟಾಭಿರಾಮ ಪ್ರೌಢಶಾಲಾ ಮೈದಾನದಿಂದ ಜಾಥಾ ಹೊರಟು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದರು.ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜೆ.ಎಂ. ನಟರಾಜ್, ಕಾರ್ಯದರ್ಶಿ ಅಣ್ಣೇಗೌಡ, ಸದಸ್ಯ ಪ್ರಭಾಕರ್, ಗಣತಿ ಮೇಲ್ವಿಚಾರಕ ರೆಹಮತ್ ಉಲ್ಲಾ, ಇ.ಸಿ.ಓ. ಸ್ವಾಮಿಗೌಡ, ಚಂದ್ರೇಗೌಡ, ಗಣತಿದಾರರಾದ ಎಚ್.ಮಂಜೇಗೌಡ, ಕೆ.ಜೆ. ಪ್ರಕಾಶ್ ಮುಂತಾದವರು ಪಾಲ್ಗೊಂಡಿದ್ದರು.

ಗಣತಿಗೆ ಸಹಕಾರ ನೀಡಲು ಶಾಸಕ ಮನವಿ
ಬೇಲೂರು:  ‘ಜನಗಣತಿ ನೂನ್ಯತೆ ಇಲ್ಲದಂತೆ ನಡೆಯಲು ಜನರು ಸಾಮೂಹಿಕವಾಗಿ ಸಹಕಾರ ನೀಡುವುದು ಅವಶ್ಯಕವಾಗಿದೆ’ ಎಂದು ಶಾಸಕ ವೈ.ಎನ್.ರುದ್ರೇಶ್‌ಗೌಡ ಹೇಳಿದರು.ಪುರಸಭೆಯ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜನಗಣತಿ -2011ನ್ನು ಉದ್ಘಾಟಿಸಿ ಮಾತನಾಡಿ, ಕಳೆದ ಬಾರಿ ನಡೆದ ಜನಗಣತಿ ಹಲವು ನ್ಯೂನ್ಯತೆಗಳಿಂದ ಕೂಡಿತ್ತು. ಈ ಬಾರಿ ಹಾಗಾಗದಂತೆ ನೋಡಿಕೊಳ್ಳುವ ಸಲುವಾಗಿ ಸುಮಾರು 29 ಮಾಹಿತಿ ಕೇಳಲಾಗಿದೆ. ಈ ಎಲ್ಲಾ ವಿಚಾರಗಳಿಗೆ ಜನರು ಸಮರ್ಪಕ ಮಾಹಿತಿ ನೀಡುವುದು ಅವಶ್ಯಕವಾಗಿದೆ ಎಂದರು.

ಸಾರ್ವಜನಿಕರು ನೀಡುವ ಮಾಹಿತಿ ಗೋಪ್ಯವಾಗಿರುವುದರಿಂದ ಮಾಹಿತಿ ನೀಡಲು ಹಿಂಜರಿಯ ಬಾರದು. ಜನಗಣತಿ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವುದರ ಮೂಲಕ ಜನಗಣತಿಯ ಯಶಸ್ವಿಗೆ ಕಾರಣರಾಗಬೇಕು. 2011ರ ಜನಗಣತಿ ದೇಶದ ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ ಕಾರ್ಯವಾಗಿದೆ ಎಂದು ತಿಳಿಸಿದರು.ಪುರಸಭಾಧ್ಯಕ್ಷ ಎಚ್.ಎಂ.ದಯಾನಂದ್ ಅಧ್ಯಕ್ಷತೆ ವಹಿಸಿದ್ದರು. ಜನಗಣತಿ ನೋಡಲ್ ಅಧಿಕಾರಿ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಸುರೇಶ್‌ಬಾಬು, ಆರೋಗ್ಯಾಧಿಕಾರಿ ವೆಂಕಟೇಶ್, ಎಂಜಿನಿಯರ್ ಕವಿತ ಹಾಜರಿದ್ದರು.

ಜನಗಣತಿಗೆ ಮಾಹಿತಿ ನೀಡಿದ ಜಿ.ಪಂ. ಸದಸ್ಯೆ ಅಂಬಿಕಾ
ಹಿರೀಸಾವೆ: ಎರಡನೇ ಹಂತದ ‘ಜನಗಣತಿ’ ಕಾರ್ಯವು ಹೋಬಳಿಯಲ್ಲಿ ಪ್ರಾರಂಭವಾಗಿದ್ದು, ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮನೆಯಲ್ಲಿ ವಾಸವಿರುವವರ ಮಾಹಿತಿ ಬುಧವಾರ ಸಂಗ್ರಹಿಸಿದರು.

ಹೋಬಳಿಯಲ್ಲಿ 87 ಶಿಕ್ಷಕರು ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ. 13 ಜನ ಗಣತಿದಾರರ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದಿನಿಂದ  28 ರವರೆಗೆ ಜನಗಣತಿ ನಡೆಯಲಿದೆ. 28 ರ ರಾತ್ರಿ ಹೋಬಳಿಯಲ್ಲಿರುವ ಅಲೆಮಾರಿಗಳ ಸಮೀಕ್ಷೆ ಮಾಡಲಾಗುವುದು ಎಂದು ಕಂದಾಯವೃತ್ತ ನಿರೀಕ್ಷಕ ರಾಮಶೆಟ್ಟರ್ ಹೇಳಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಜಿ.ಅಂಬಿಕಾರಾಮಕೃಷ್ಣರವರು ಗಣತಿದಾರರಾದ ಚಂದ್ರಶೇಖರವರಿಗೆ ಮಾಹಿತಿ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲರು ಸರಿಯಾದ, ಸ್ವಷ್ಟವಾದ ಮಾಹಿತಿಯನ್ನು ನೀಡಬೇಕು, ಜನಗಣತಿಯಿಂದ ದೇಶದ ಅಭಿವೃದ್ದಿಗೆ ಸರ್ಕಾರಗಳು ಕಾರ್ಯಕ್ರಮ ರೂಪಿಸಲು ಸಹಕಾರಿಯಾಗುತ್ತದೆ ಎಂದರು.

ಮಾಜಿ ಶಾಸಕರಾದ ದಿ.ಎನ್.ಗಂಗಾಧರ್‌ರವರ ಪತ್ನಿ ಸುಶೀಲಮ್ಮನವರು ಸಹ ಈ ವೇಳೆಯಲ್ಲಿ ಮಾಹಿತಿ ನೀಡಿದರು. ಗ್ರಾಮ ಲೆಕ್ಕಿಗರಾದ ಸುಕಂದರಾಜು ಹಾಗು ಮತ್ತಿತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT