ಚಿಕ್ಕಮಗಳೂರು: ಅಡಿಕೆ ಮತ್ತು ತೆಂಗು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ತೀವ್ರ ಪ್ರಯತ್ನ ಮಾಡಿದ್ದೇನೆ. ಕೇಂದ್ರದ ಯುಪಿಎ ಸರ್ಕಾರ ಅಡಿಕೆ ನಿಷೇಧಿಸುವ ಕುರಿತು ಯಾವಪ್ರಸ್ತಾಪ ಮಾಡಿಲ್ಲ. ಕೆಲವರು ರಾಜಕೀಯ ಲಾಭಕ್ಕಾಗಿ ಗೊಂದಲ ಸೃಷ್ಟಿಸಿದ್ದಾರೆ. ವದಂತಿಗೆ ಬೆಳೆಗಾರರು ಕಿವಿಗೊಡಬಾರದು ಎಂದು ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮನವಿ ಮಾಡಿದರು.
ಸಖರಾಯಪಟ್ಟಣದಲ್ಲಿ ಹೋಬಳಿ ಕಾಂಗ್ರೆಸ್ ಭಾರತ ನಿರ್ಮಾಣ ಯಾತ್ರಾ ಅಂಗವಾಗಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕಡೂರು-ಚಿಕ್ಕಮಗಳೂರು ರೈಲ್ವೆ ಯೋಜನೆ ಕಾಮಗಾರಿಗೆ ಅಗತ್ಯ ಅನುದಾನ ತರುವಲ್ಲಿ ಶಕ್ತಿಮೀರಿ ಕೆಲಸ ಮಾಡಿದ್ದೇನೆ. ಚಿಕ್ಕಮಗಳೂರಿನಿಂದ ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆ ಕಾಮಗಾರಿಗೆ ಚಾಲನೆ ದೊರೆತಿದೆ. ಕೆಲವರು ಈ ವಿಚಾರವನ್ನು ಸಂಶಯದ ದೃಷ್ಟಿಯಲ್ಲೇ ನೋಡುತ್ತಿದ್ದಾರೆ. ಕೇಂದ್ರದ ವಿವಿಧ ಯೋಜನೆಗಳಡಿಯಲ್ಲಿ ಸಾಕಷ್ಟು ಅನುದಾನ ಕ್ಷೇತ್ರಕ್ಕೆ ತಂದಿರುವುದಾಗಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರು, ಕೂಲಿ ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಪರವಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದ್ದಾರೆ. ಅಂಬೇಡ್ಕರ್ ನಿಗಮ, ಅಲ್ಪಸಂಖ್ಯಾತರ ನಿಗಮ, ಹಿಂದುಳಿದ ವರ್ಗಗಳ ನಿಗಮಗಳಲ್ಲಿ ಪಡೆದಿದ್ದ ಸಾಲವನ್ನು ಮುಖ್ಯ ಮಂತ್ರಿ ಮನ್ನಾ ಮಾಡುವ ಮೂಲಕ ಸಾಲದ ಶೂಲದಿಂದ ರಕ್ಷಿಸಿದ್ದಾರೆ ಎಂದರು.