ದಾವಣಗೆರೆ: ಹಳೆಯ ವಿದ್ಯಾರ್ಥಿಗಳು ತಾವು ಓದಿದ ಸಂಸ್ಥೆಯನ್ನು ಮರೆಯದೇ ಅದರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ.ಎಸ್. ಇಂದುಮತಿ ಕರೆ ನೀಡಿದರು.
ದಾವಣಗೆರೆ ವಿವಿಯಲ್ಲಿ ಭಾನುವಾರ ಎಂಬಿಎ ಹಳೆಯ ವಿದ್ಯಾರ್ಥಿಗಳ ಸಂಘದ ವೆಬ್ಸೈಟ್ ಉದ್ಘಾಟಿಸಿ ಅವರು ಮಾತನಾಡಿದರು.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಳೆಯ ವಿದ್ಯಾರ್ಥಿಗಳು ತಾವು ಓದಿದ ಸಂಸ್ಥೆಗೆ ಅಪಾರ ಕೊಡುಗೆ ನೀಡುತ್ತಾರೆ. ಅದನ್ನು ಇಲ್ಲಿನ ವಿದ್ಯಾರ್ಥಿಗಳೂ ಅನುಸರಿಸಬೇಕು. ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು. ಪರಿಸರದ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
2004-05ನೇ ಸಾಲಿನಲ್ಲಿ ಪದವಿ ಪಡೆದ ಹಳೆಯ ವಿದ್ಯಾರ್ಥಿ ಆರ್. ಸಂಕೇತ್ ಅವರು, ಎಂ.ಬಿ.ಎ. ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆಯುವ ವಿದ್ಯಾರ್ಥಿಗೆ ತಮ್ಮ ತಂದೆಯ ಹೆಸರಿನಲ್ಲಿ ಬಂಗಾರದ ಪದಕ ನೀಡುವುದಾಗಿ ತಿಳಿಸಿದರು.
ಇನ್ನೊಂದು ಚಿನ್ನದ ಪದಕವನ್ನು ಹಳೆಯ ವಿದ್ಯಾರ್ಥಿಗಳ ಸಂಘದ ಪರವಾಗಿ ನೀಡುವುದಾಗಿ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ. ಸುರೇಂದ್ರ ಘೋಷಿಸಿದರು.
ಕುಬೇಂದ್ರ ರೆಡ್ಡಿ ಪ್ರಾರ್ಥಿಸಿದರು. ಪ್ರೊ.ವಿ. ಮುರುಗಯ್ಯ ಸ್ವಾಗತಿಸಿದರು. ಡಿ. ರಾಕೇಶ್, ಎಚ್.ಜಿ. ಪದ್ಮಾ ಕಾರ್ಯಕ್ರಮ ನಿರೂಪಿಸಿದರು.