ನವದೆಹಲಿ (ಪಿಟಿಐ): ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಸುಳ್ಳು ಲೆಕ್ಕ ತೋರಿಸಿದರೆ ಅಂತಹ ಅಭ್ಯರ್ಥಿಯನ್ನು ಅನರ್ಹಗೊಳಿಸುವ ಅಧಿಕಾರ ತನಗೆ ಇದೆ ಎಂದು ಚುನಾವಣಾ ಆಯೋಗ ಪ್ರತಿಪಾದಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ ಚವ್ಹಾಣ್ ಅವರಿಗೆ ಸಂಬಂಧಿಸಿದ `ಕಾಸಿಗಾಗಿ ಸುದ್ದಿ' ಪ್ರಕರಣದಲ್ಲಿ ಸುಪ್ರೀಂಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿರುವ ಆಯೋಗವು, ತನ್ನ ಅಧಿಕಾರವನ್ನು ಬಲವಾಗಿ ಸಮರ್ಥಿಸಿಕೊಂಡಿದೆ.
ಸುಳ್ಳು ಲೆಕ್ಕ ಕೊಡುವ ಅಭ್ಯರ್ಥಿಗಳನ್ನು ಅನರ್ಹಗೊಳಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ ಎಂಬ ಕಾನೂನು ಸಚಿವಾಲಯದ ಹೇಳಿಕೆಯನ್ನು ಪ್ರಮಾಣಪತ್ರದಲ್ಲಿ ಅಲ್ಲಗಳೆದಿದೆ.
ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸರಿಯಾದ ಲೆಕ್ಕಾಚಾರ ನಿರ್ವಹಿಸದೇ ಹೋದರೆ ಅಂತಹ ಅಭ್ಯರ್ಥಿಯನ್ನು ಮೂರು ವರ್ಷಗಳ ಅವಧಿಗೆ ಅನರ್ಹಗೊಳಿಸಲು ಅಧಿಕಾರವಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದ ಕುರಿತು ಪರಿಶೀಲನೆ ನಡೆಸುವುದಷ್ಟೇ ತನ್ನ ಕೆಲಸವಲ್ಲ, ಇದಕ್ಕೆ ಸಂಬಂಧಿಸಿದಂತೆ ಸುಳ್ಳು ಲೆಕ್ಕಾಚಾರ ಕೊಡುವವರ ವಿರುದ್ಧ ಕ್ರಮ ಜರುಗಿಸಲು ಕೂಡ ತನಗೆ ಅಧಿಕಾರವಿದೆ ಎಂದು ಚುನಾವಣಾ ಆಯೋಗ ಪ್ರತಿಪಾದಿಸಿದೆ.