ಮಡಿಕೇರಿ: ಚುನಾವಣೆಯಲ್ಲಿ ಯಾವುದೇ ಅವ್ಯವಹಾರಗಳು ನಡೆಯದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ವಹಿಸುವಂತೆ ಜಿಲ್ಲೆಯ ಚುನಾವಣಾ ವೆಚ್ಚ ವೀಕ್ಷಕರಾಗಿ ಆಗಮಿಸಿರುವ ಶಶಿ ಸಕ್ಲಾನಿ ಎಂದು ನಿರ್ದೇಶಿಸಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿ (ಉಪ ವಿಭಾಗಾಧಿಕಾರಿ) ಹಾಗೂ ಮಾಧ್ಯಮ ದೃಢೀಕರಣ ಮತ್ತು ನಿರ್ವಹಣಾ ಸಮಿತಿ ಕಚೇರಿಗಳಿಗೆ ಶುಕ್ರವಾರ ಭೇಟಿ ನೀಡಿ ಚುನಾವಣಾ ವೆಚ್ಚದ ನಿರ್ವಹಣೆ ಕಾರ್ಯಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಅವರು ಮಾತನಾಡಿದರು.
ಈಗಾಗಲೇ ವಿಡಿಯೋ ಸರ್ವಿಲೆನ್ಸ್ನ ಚೆಕ್ಪೋಸ್ಟ್ಗಳಿಗೆ ಭೇಟಿ ನೀಡಿ ತಂಡದಲ್ಲಿ ನಿಯೋಜಿಸಿರುವ ಅಧಿಕಾರಿಗಳಿಗೆ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸುವ ವಾಹನಗಳ ತಪಾಸಣೆಯನ್ನು ಕಟ್ಟುನಿಟ್ಟಾಗಿ ಮಾಡಲು ನಿರ್ದೇಶನ ನೀಡಲಾಗಿದೆ ಎಂದರು.
ಚುನಾವಣೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ವ್ಯೆವಿಂಗ್ ತಂಡ, ಸ್ಟಾಟಿಕ್ ಸರ್ವಿಲೆನ್ಸ್ ತಂಡ, ಚೆಕ್ಪೋಸ್ಟ್ ತಂಡಗಳ ಅಧಿಕಾರಿಗಳಿಗೆ ಶಾಂತಿಯುತ ಚುನಾವಣೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾ ವಣಾಧಿಕಾರಿ ಜಿ.ಪ್ರಭು, ಚುನಾವಣಾ ವೆಚ್ಚದ ಜಿಲ್ಲಾ ನೋಡಲ್ ಅಧಿಕಾರಿ ಶ್ರಿನಿವಾಸ ರಾವ್ ಅವರು ಚುನಾವಣಾ ಸಿದ್ಧತೆ ಹಾಗೂ ಚುನಾವಣಾ ವೆಚ್ಚದ ಬಗ್ಗೆ ಮಾಹಿತಿ ನೀಡಿದರು.
ಮಾಧ್ಯಮ ದೃಢೀಕರಣ ಮತ್ತು ನಿರ್ವಹಣಾ ಸಮಿತಿ ಸದಸ್ಯರಾದ ಸಿ.ಜಗನ್ನಾಥ ಮತ್ತು ಎನ್.ಎಂ. ಶಶಿಕುಮಾರ್ ಅವರು ಎಂಸಿಎಂಸಿ ಕಾರ್ಯ ಚಟುವಟಿಕೆಗಳ ಬಗ್ಗೆ ಹಲವು ಮಾಹಿತಿ ನೀಡಿದರು.
ಸಹಾಯಕ ವೆಚ್ಚ ನೋಡಲ್ ಅಧಿಕಾರಿ ಎನ್.ನಂಜುಂಡರಾಜು, ಎಂಸಿಎಂಸಿ ತಂಡದ ಸದಸ್ಯರಾದ ವಿ.ಪಣೀಶ್, ಜಿ.ಗಾಯತ್ರಿ, ಕಬೀರ್, ಸುಮಾ ಮತ್ತಿತರರು ಇದ್ದರು.
ಚುನಾವಣಾ ವೆಚ್ಚದ ತಂಡ
ಚುನಾವಣಾ ವೆಚ್ಚದ ಜಿಲ್ಲಾ ನೋಡಲ್ ಅಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಎ.ಶ್ರಿನಿವಾಸ್ ರಾವ್ (9448501237) ಹಾಗೂ ಚುನಾವಣಾ ವೆಚ್ಚದ ಜಿಲ್ಲಾ ಸಹಾಯಕ ನೋಡಲ್ ಅಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಎನ್.ನಂಜುಂಡರಾಜು (9945372171) ಅವರನ್ನು ನೇಮಕ ಮಾಡಲಾಗಿದೆ.
ವಿಧಾನಸಭೆ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿ ಚುನಾವಣಾ ವೆಚ್ಚದ ಲೆಕ್ಕ ಪರಿಶೀಲನಾ ಅಧಿಕಾರಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಜಿ.ಪಂ.ಲೆಕ್ಕಾಧಿಕಾರಿ ಕೆ.ಎ.ಗೋಪಾಲ್(7760032497), ಜಿಲ್ಲಾ ಪಂಚಾಯಿತಿ ಲೆಕ್ಕ ಅಧೀಕ್ಷಕರಾದ ಎ.ಎಚ್.ಶ್ರಿಧರ ಮೂರ್ತಿ ಹಾಗೂ ಪ್ರ.ದ.ಸ. ಮುಖ್ಯ ಲೆಕ್ಕಾಧಿಕಾರಿ ಕಚೇರಿಯ ಗಂಗಪ್ಪ ಕಲ್ಲಪ್ಪ ಮಿರ್ಜಿ (9242315182) ಅವರನ್ನು ನೇಮಕ ಮಾಡಲಾಗಿದೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲ ಲೆಕ್ಕ ಪರಿಶೋಧಕರು, ಸಹಾಯಕ ನಿಯಂತ್ರಕ ಕೋಟೇಶ್ವರ್ (94496663056), ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಲೆಕ್ಕ ಅಧೀಕ್ಷಕ ಪಿ.ಎಂ.ಡಾಲಿ (9480869111) ಹಾಗೂ ಪೊನ್ನಂಪೇಟೆ ಪತ್ರಾಂಕಿತ ಉಪ ಖಜಾನೆಯ ದ್ವಿ.ದ.ಸ. ಕೆ.ಎಸ್. ವಾಸುದೇವ (9964182407) ಅವರನ್ನು ನೇಮಕ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.