ಮೂಡಿಗೆರೆ: ಹಿಂದಿನ ಹದಿನೈದು ಲೋಕಸಭಾ ಚುನಾವಣೆಯಲ್ಲೂ ಕ್ಷೇತ್ರದಿಂದ ಆಯ್ಕೆಯಾಗಿರುವ ಲೋಕಸಭಾ ಪ್ರತಿನಿಧಿಗಳು ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂದು ಭಾರತ ಕಮ್ಯುನಿಸ್ಟ್ (ಎಂ.ಎಲ್) ಪಕ್ಷದ ಜಿಲ್ಲಾ ಮಂಡಳಿ ಸದಸ್ಯ ಉಮೇಶ್ ಆರೋಪಿಸಿದರು.
ಪಟ್ಟಣದಲ್ಲಿ ಶುಕ್ರವಾರ ಪಕ್ಷದ ವತಿಯಿಂದ ನಡೆಸಲಾದ ಒಂದು ನೋಟು– ಒಂದು ಓಟು ಕಾರ್ಯಕ್ರಮ್ಕಕೆ ಚಾಲನೆ ನೀಡಿ ಮಾತನಾಡಿದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಶ್ರೀಮಂತ ವ್ಯಕ್ತಿಗಳ ಪರವಾಗಿ, ಕಾರ್ಪೋರೇಟರ ಪರವಾಗಿ ಆಡಳಿತ ನಡೆಸುತ್ತಿದ್ದು, ಜನ ಸಾಮಾನ್ಯರು ಮತ್ತು ಬಡ ವರ್ಗವನ್ನು ಕಡೆಗಣಿಸಿದ್ದಾರೆ. ಕಳೆದ ಅವಧಿಯಲ್ಲಿ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್ನ ಜಯಪ್ರಕಾಶ್ ಹೆಗ್ಡೆ ಅವರಿಂದ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ಶೂನ್ಯವಾಗಿದೆ ಎಂದು ಆರೋಪಿಸಿದರು. ಬಿಜೆಪಿ ಪಕ್ಷವು ಸ್ಥಳೀಯರಲ್ಲದ ನಾಯಕರನ್ನು ಚುನಾವಣಾ ಕಣಕ್ಕೆ ಇಳಿಸಿದ್ದು, ಈ ಪಕ್ಷಗಳಿಗೆ ಸ್ಥಳೀಯ ಸಮಸ್ಯೆಗಳಿಗಿಂತ ಗೆಲುವುಗಳೇ ಮುಖ್ಯವಾಗಿದೆ ಎಂದು ಆರೋಪಿಸಿದರು.
ಕ್ಷೇತ್ರದಿಂದ ನಿರಂತರವಾಗಿ ಕಾರ್ಮಿಕರ ಸಮಸ್ಯೆ ನಿವಾರಣೆ, ಬಡವರ ಏಳಿಗೆಗಾಗಿ ಹೋರಾಟ ಮಾಡುತ್ತಿರುವ ಸಿಪಿಐ ಎಂ.ಎಲ್. ಪಕ್ಷವು ಈ ಬಾರಿ ಲೋಕಸಭಾ ಚುನಾವಣೆಗೆ ಕ್ಷೇತ್ರದ ಅಭ್ಯರ್ಥಿಯಾಗಿ ಸಿ.ಜೆ.ಜಗನ್ನಾಥ್ ಅವರನ್ನು ಕಣಕ್ಕೆ ಇಳಿಸಲಾಗಿದ್ದು, ‘ಓಟು ಬದಲಾವಣೆಗಾಗಿ, ಓಟು ಅಧಿಕಾರಕ್ಕಾಗಿ’ ಎಂಬ ಘೋಷಣೆಗಳೊಂದಿಗೆ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಚುನಾವಣೆಯ ಅಂಗವಾಗಿ ಒಂದು ನೋಟು ಕೊಡುವುದರ ಜೊತೆಗೆ ಒಂದು ಓಟು ಕೊಡುವಂತೆ ಮತಯಾಚನೆ ನಡೆಸಿ ಹಣ ಸಂಗ್ರಹ ಮಾಡಿದರು. ಸಿಪಿಐ ಎಂ.ಎಲ್. ಪಕ್ಷದ ಅಭ್ಯರ್ಥಿ ಸಿ.ಜೆ.ಜಗನ್ನಾಥ್, ಪದಾಧಿಕಾರಿಗಳಾದ ಗೋಪಾಲ್, ಕುಮಾರ್, ಬಸವರಾಜು, ಕೆಂಚಯ್ಯ, ವಿಜಯ ಮುಂತಾದವರಿದ್ದರು.