ನವದೆಹಲಿ (ಐಎಎನ್ಎಸ್): ರಾಜ್ಯಸಭಾ ಸದಸ್ಯ ಹಾಗೂ ಸಮಾಜವಾದಿ ಪಕ್ಷದ ಮಾಜಿ ಧುರೀಣ ಅಮರಸಿಂಗ್ ಅವರ ~ವೋಟಿಗಾಗಿ ನೋಟು~ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಮಂಗಳವಾರ ಎರಡು ದಿನಗಳ ಅವಧಿಗೆ ಮುಂದೂಡಿತು.
ವಿಶೇಷ ನ್ಯಾಯಾಧೀಶರಾದ ಸಂಗೀತಾ ಧಿಂಗ್ರ ಸೆಹಗಲ್ ಅವರು ಪ್ರಕರಣದ ವಿಚಾರಣೆಯಲ್ಲಿ ಗುರುವಾರಕ್ಕೆ ನಿಗದಿ ಪಡಿಸಿದರು. ಅದಕ್ಕೆ ಮೊದಲು 55ರ ಹರೆಯದ ಅಮರಸಿಂಗ್ ಅವರ ಸಮಗ್ರ ವೈದ್ಯಕೀಯ ವರದಿಯನ್ನು ಬುಧವಾರ ಮಧ್ಯಾಹ್ನ 12 ಗಂಟೆಯ ಒಳಗೆ ಸಲ್ಲಿಸುವಂತೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ನಿರ್ದೇಶಕರು ಮತ್ತು ತಿಹಾರ್ ಸೆರೆಮನೆ ಸೂಪರಿಂಟೆಂಡೆಂಟ್ ಅವರಿಗೆ ನಿರ್ದೇಶಿಸಿದರು.
2008ರ ಜುಲೈ ತಿಂಗಳಲ್ಲಿ ಸಂಸತ್ತಿನಲ್ಲಿ ನಡೆದ ವಿಶ್ವಾತ ಮತ ಯಾಚನೆಗೆ ಮುನ್ನ ಸಂಸತ್ ಸದಸ್ಯರಿಗೆ ಹಣ ನೀಡುವ ಪ್ರಯತ್ನದ ಪ್ರಕರಣದಲ್ಲಿ ಷಾಮೀಲಾದುದಕ್ಕಾಗಿ ಸೆಪ್ಟೆಂಬರ್ 6ರಂದು ಅಮರಸಿಂಗ್ ಅವರನ್ನು ಬಂಧಿಸಲಾಗಿತ್ತು.
ಕಿಡ್ನಿ ಸಂಬಂಧಿತ ಸಮಸ್ಯೆಯ ಹಿನ್ನೆಲೆಯಲ್ಲಿ ಅಮರಸಿಂಗ್ ಅವರನ್ನು ಸೋಮವಾರ ಸಂಜೆ ತಿಹಾರ್ ಸೆರೆಮನೆಯಿಂದ ಏಮ್ಸ್ ಗೆ ಸ್ಥಳಾಂತರಿಲಾಗಿತ್ತು.
ಈ ಮಧ್ಯೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಬಿಜೆಪಿಯ ಮಾಜಿ ಸಂಸದರಾದ ಮಹಾಬೀರ್ ಸಿಂಗ್ ಭಗೋರಾ ಮತ್ತು ಫಗನ್ ಸಿಂಗ್ ಕುಲಸ್ತೆ ಅವರ ಜಾಮೀನು ಕೋರಿಕೆ ಅರ್ಜಿಗಳನ್ನು ನ್ಯಾಯಾಧೀಶರು ಸೆಪ್ಟೆಂಬರ್ 29ಕ್ಕೆ ಮುಂದೂಡಿದರು.