ನವದೆಹಲಿ (ಪಿಟಿಐ): ವೋಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಸಂಸದ ಅಮರಸಿಂಗ್ ಅವರು ಸಲ್ಲಿಸಿದ ಜಾಮೀನು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಮಂಗಳವಾರ ಒಂದು ದಿನದ ಮಟ್ಟಿಗೆ ಮುಂದೂಡಿತು.
ಕೋರ್ಟ್ಗೆ ಹಾಜರಾದ ಸರ್ಕಾರಿ ಕಿರಿಯ ವಕೀಲರು ಮಂಗಳವಾರ ಹಿರಿಯ ವಕೀಲರು ಲಭ್ಯವಿರುವುದಿಲ್ಲ ಎಂದು ತಿಳಿಸಿದಾಗ ನ್ಯಾಯಮೂರ್ತಿ ಸುರೇಶ ಕೆಟ್ ಅವರು ಸಿಂಗ್ ಪರ ವಕೀಲರು ಸಲ್ಲಿಸಿರುವ ಕಾಯಂ ಜಾಮೀನು ಹಾಗೂ ಮಧ್ಯಂತರ ಜಾಮೀನು ಅರ್ಜಿಗಳ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 2.15ಕ್ಕೆ ನಡೆಸುವುದಾಗಿ ತಿಳಿಸಿದರು.
ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ `ಅಪಕೀರ್ತಿ~ ತರುವ ಈ ಹಗರಣದಲ್ಲಿ ಅಮರಸಿಂಗ್ ಅವರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿ ಸ್ಥಳೀಯ ನ್ಯಾಯಾಲಯವು ಸೆಪ್ಟೆಂಬರ್ 28 ರಂದು ಅಮರಸಿಂಗ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ನಂತರ ಸಿಂಗ್ ಅವರು ಜಾಮೀನಿಗಾಗಿ ಹೈಕೋರ್ಟ್ನ ಮೊರೆ ಹೋಗಿದ್ದರು.
ವೋಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ಸಿಂಗ್ ಅವರು ಕೋರ್ಟ್ನ ಸಮನ್ಸ್ಗೆ ಉತ್ತರಿಸಲು ಸ್ಥಳೀಯ ತೀಸ್ ಹಜಾರಿ ನ್ಯಾಯಾಲಯಕ್ಕೆ ಸೆಪ್ಟೆಂಬರ್ 6 ರಂದು ಆಗಮಿಸಿದ ವೇಳೆ ಅವರನ್ನು ಬಂಧಿಸಿ ತಿಹಾರ್ ಸೆರೆಮನೆ ಕಳುಹಿಸಲಾಗಿತ್ತು. ನಂತರ ಸೆಪ್ಟೆಂಬರ್ 12 ರಂದು ಅನಾರೋಗ್ಯದ ಕಾರಣದಿಂದ ಅವರನ್ನು ದೆಹಲಿಯ ಎಐಐಎಂಎಸ್ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ನ್ಯಾಯಾಲಯದ ನಿರ್ದೇಶನದ ಮೆರೆಗೆ ಅಕ್ಟೋಬರ್ 12 ರಂದು ಸಿಂಗ್ ಅವರ ಆರೋಗ್ಯ ಪರಿಸ್ಥಿತಿ ಕುರಿತು ನ್ಯಾಯಾಲಯಕ್ಕೆ ಸಲ್ಲಿಸಲಾದ ವೈದ್ಯಕೀಯ ವರದಿಯಲ್ಲಿ ಅವರಿಗೆ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯವಿದೆ ಎಂದು ತಿಳಿಸಲಾಗಿತ್ತು.