ನವದೆಹಲಿ (ಪಿಟಿಐ):`ವೋಟಿಗಾಗಿ ನೋಟು~ ಹಗರಣದ ಪ್ರಮುಖ ಆರೋಪಿ ಹಾಗೂ ಬಂಧಿತ ರಾಜ್ಯಸಭಾ ಸದಸ್ಯ ಅಮರ್ಸಿಂಗ್ಗೆ ಗುರುವಾರ ದೆಹಲಿಯ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಇಲ್ಲಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಸಂಗೀತಾ ಧಿಂಗ್ರಾ ಸೆಹಗಲ್ ಅವರು ಸೆಪ್ಟೆಂಬರ್ 19ರ ವರೆಗೆ ಅಮರ್ಸಿಂಗ್ಗೆ ಮಧ್ಯಂತರ ಜಾಮೀನು ನೀಡಲು ಸಮ್ಮತಿಸಿದರು.
2 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಭದ್ರತೆಯ ಆಧಾರದ ಮೇಲೆ ಈ ಜಾಮೀನು ನೀಡಲಾಗಿದ್ದು, ಸಿಂಗ್ ತಮ್ಮ ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಮತ್ತು ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೆಹಲಿ ಬಿಟ್ಟು ಹೊರಹೋಗುವಂತಿಲ್ಲ ಎಂದೂ ಷರತ್ತು ವಿಧಿಸಿದ್ದಾರೆ.
ಮೂತ್ರಪಿಂಡ ಕಸಿಗೆ ಒಳಗಾಗಿರುವ ಅಮರ್ ಸಿಂಗ್ ಅವರಿಗೆ ತಕ್ಷಣವೇ ಜಾಮೀನು ನೀಡುವಂತೆ ಅವರ ಪರ ವಕೀಲರಾದ ಹರಿಹರನ್ ಸಿಂಗ್ ಬುಧವಾರ ನ್ಯಾಯಾಲಯಕ್ಕೆ ವೈದ್ಯಕೀಯ ದಾಖಲೆ ಒದಗಿಸಿದ್ದರು.
55 ವರ್ಷದ ಅಮರ್ಸಿಂಗ್ ಸಮಾಜವಾದಿ ಪಕ್ಷದ ಮಾಜಿ ನಾಯಕರಾಗಿದ್ದು ಸೆ.6ರಂದು ಇವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು.