ನವದೆಹಲಿ, (ಪಿಟಿಐ): ಒಂದು ತಿಂಗಳಿನಿಂದ ಅನಾರೋಗ್ಯದಿಂದಾಗಿ ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾಸಂಸ್ಥೆಯಲ್ಲಿ (ಏಮ್ಸ) ಚಿಕಿತ್ಸೆ ಪಡೆಯುತ್ತಿದ್ದ ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಅವರನ್ನು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
2008ರಲ್ಲಿ ನಡೆದ `ವೋಟಿಗಾಗಿ ನೋಟು~ ಹಗರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿದ್ದ ಅವರ ಆರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 12ರಂದು ಏಮ್ಸಗೆ ದಾಖಲಿಸಲಾಗಿತ್ತು. ಅಕ್ಟೋಬರ್ 24ರಂದು ನ್ಯಾಯಾಲಯ ಅವರಿಗೆ ವೈದ್ಯಕೀಯ ಹಾಗೂ ಮಾನವೀಯ ಆಧಾರದ ಮೇಲೆ ಜಾಮೀನು ನೀಡಿತ್ತು.
ರಕ್ತದಲ್ಲಿ `ಕ್ರೆಟಾನಿನ್~ ರಾಸಾಯನಿಕ ಪ್ರಮಾಣ ಹೆಚ್ಚಾಗಿ ಉಲ್ಬಣಿಸಿದ ಮೂತ್ರಕೋಶದ ಸೋಂಕಿಗಾಗಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ 55 ವರ್ಷದ ಅಮರ್ ಸಿಂಗ್, ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರಕ್ಕೆ ತೆರಳಲು ನ್ಯಾಯಾಲಯದ ಅನುಮತಿ ಕೋರುವುದಾಗಿ ತಿಳಿಸಿದರು.
`ಸಮಾಜವಾದಿ ಪಕ್ಷದೊಂದಿಗೆ ಈ ಹಿಂದೆ ಹೊಂದಿದ್ದ ಎಲ್ಲ ಸಂಬಂಧಗಳನ್ನೂ ಮರೆಯಲು ಯತ್ನಿಸುತ್ತಿದ್ದೇನೆ. ಇನ್ನೂ ಕೂಡ ನನ್ನ ಹೆಸರನ್ನು ಆ ಪಕ್ಷದೊಂದಿಗೆ ಥಳಕು ಹಾಕುವುದನ್ನು ಬಯಸುವುದಿಲ್ಲ~ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಗಾಲಿ ಕುರ್ಚಿಯಲ್ಲಿ ಹೊರಬಂದ ಸಿಂಗ್, ಇನ್ನೂ ತಾವು ಪೂರ್ಣ ಪ್ರಮಾಣದಲ್ಲಿ ಮೂತ್ರಕೋಶ ಹಾಗೂ ನಾಳದ ಸೋಂಕಿನಿಂದ ಮುಕ್ತರಾಗಿಲ್ಲ. ಮೂತ್ರಕೋಶ ಕಸಿ ಮಾಡಿಸಿಕೊಂಡ ದಿನದಿಂದ ತಾವು ಚಿಕಿತ್ಸೆಗಾಗಿ ಸಿಂಗಪುರಕ್ಕೆ ಭೇಟಿ ನೀಡುತ್ತಿದ್ದು, ಕೆಲ ದಿನಗಳಿಂದ ಅಲ್ಲಿಗೆ ತೆರಳಲು ಸಾಧ್ಯವಾಗಲಿಲ್ಲ. ಹೀಗಾಗಿ ಕೋರ್ಟ್ ಅನುಮತಿ ಕೋರುವುದಾಗಿ ತಿಳಿಸಿದರು. ನಟಿ ಹಾಗೂ ರಾಜಕಾರಣಿ ಜಯಪ್ರದಾ ಈ ಸಂದರ್ಭದಲ್ಲಿ ಅವರ ಜೊತೆಗಿದ್ದರು.