`ಕತ್ರಿನಾ ಕೈಫ್ ಜೊತೆಗೆ ಇದೇ ಮೊದಲ ಬಾರಿಗೆ ನಟಿಸುತ್ತಿದ್ದೇನೆ. ಧೂಂ 3 ಚಿತ್ರೀಕರಣಕ್ಕಾಗಿ ಎದುರು ನೋಡುತ್ತಿದ್ದೇನೆ~ ಎಂದು ಮಿ.ಪರ್ಫೆಕ್ಷನಿಸ್ಟ್ ಎಂದೇ ಹೆಸರಾಗಿರುವ ಆಮಿರ್ ಖಾನ್ ಹೇಳಿದ್ದಾರೆ.
`ಧೂಂ ಚಿತ್ರದಲ್ಲಿ ನಾನು ಯಾವ ರೀತಿ ಕಾಣಿಸಿಕೊಳ್ಳಬಹುದು ಎಂಬ ಬಗ್ಗೆ ಈಗಲೇ ಹೇಳಲಾಗದು. ಲುಕ್ಸ್ ಅನ್ನು ಫೈನಲೈಸ್ ಮಾಡಲಾಗುತ್ತಿದೆ. ವಿಶೇಷ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂಬುದಂತೂ ಖಾತರಿ~ ಎಂದು ಖಾನ್ ಹೇಳಿದ್ದಾರೆ.
ಇನ್ನೂ ಬಿಡುಗಡೆಯಾಗದ ಚಿತ್ರ `ತಲಾಶ್~ ವಿದ್ಯಾಬಾಲನ್ ನಟನೆಯ `ಕಹಾನಿ~ ಚಿತ್ರದೊಂದಿಗೆ ಸಾಮ್ಯತೆಯನ್ನು ಹೊಂದಿದೆಯೇ? ಅದಕ್ಕಾಗಿಯೇ `ತಲಾಶ್~ ಬಿಡುಗಡೆಯನ್ನು ಮುಂದೂಡಲಾಗಿದೆಯೇ? ಎಂಬ ಪ್ರಶ್ನೆಗಳಿಗೆ ಅಮೀರ್, ಇವೆರಡೂ ಭಿನ್ನ ಚಿತ್ರಗಳು ಎಂದು ಸ್ಪಷ್ಟ ಪಡಿಸಿದ್ದಾರೆ.
`ತಲಾಶ್ ಬಿಡುಗಡೆ ವಿಳಂಬವಾಗಲು ತಾವು ಟೀವಿ ರಿಯಾಲಿಟಿ ಶೋನಲ್ಲಿ ಬಿಸಿಯಾಗಿರುವುದೂ ಒಂದು ಕಾರಣ. ಇನ್ನೊಂದು ಕಾರಣ- ಎರಡು ವರ್ಷಗಳ ನಂತರ ತಮ್ಮ ಚಿತ್ರ ಬರುತ್ತಿರುವುದು. ಇದಕ್ಕಾಗಿ ನ.30 ವಿಶೇಷ ದಿನವನ್ನೇ ಆಯ್ಕೆ ಮಾಡಲಾಗಿದೆ. ಅಂದು ತಲಾಶ್ ಬಿಡುಗಡೆಗೊಳ್ಳಲಿದೆ~ ಎಂದೂ ವಿವರಿಸಿದ್ದಾರೆ.
`ಈ ಶೋ ಸಹ ನನ್ನ ಬದುಕನ್ನೇ ಬದಲಿಸಿದೆ. ನಾನು ಒಂದೇ ಸಮಯದಲ್ಲಿ ಎರಡೆರಡು ಕೆಲಸಗಳನ್ನು ಮಾಡಲಾರೆ. ಇದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಇದೂ ತಲಾಶ್ನ ವಿಳಂಬಕ್ಕೆ ಕಾರಣವಾಗಿದೆ~ ಎನ್ನುತ್ತಾರೆ ಅವರು.
ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದಿರುವ ಅಮೀರ್ ತಾವೇನಿದ್ದರೂ ಮನರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದವರು. ನಟನೆಯಿಂದ ನಗಿಸುವುದು, ಅಳಿಸುವುದಷ್ಟೇ ಗೊತ್ತು ಎಂದಿದ್ದಾರೆ.