ನಟ ಅಮೀರ್ ಖಾನ್ಗೆ ಮಹಾಭಾರತವನ್ನು ಹಿರಿತೆರೆಗೆ ತರುವ ಮಹತ್ವಾಕಾಂಕ್ಷೆ ಇದೆ. ಆದರೆ ಅದಕ್ಕೆ ತಮ್ಮ ಬದುಕಿನ 20 ವರ್ಷಗಳನ್ನು ಮೀಸಲಿಡಬೇಕಾದೀತೇನೋ ಎಂಬ ಅಳುಕೂ ಇದೆ. `ಮಹಾಭಾರತವನ್ನು ತೆರೆಗೆ ತರುವುದು ನನ್ನ ದೊಡ್ಡ ಕನಸು.
ಅದರಲ್ಲಿ ಕರ್ಣನ ಪಾತ್ರವನ್ನು ನಾನೇ ಮಾಡಬೇಕು ಎಂಬ ಬಯಕೆ ಮೊದಲು ಇತ್ತು. ಆದರೆ ಕರ್ಣ ಆರೂವರೆ ಅಡಿ ಎತ್ತರದ ದಿಟ್ಟ ವ್ಯಕ್ತಿ. ನಾನು ಅಷ್ಟು ಎತ್ತರವಿಲ್ಲ. ಹಾಗಾಗಿ ಕೃಷ್ಣನ ಪಾತ್ರವನ್ನು ಮಾಡಿದರೆ ಚೆನ್ನ ಎಂದುಕೊಂಡೆ. ಈ ಯೋಜನೆ ನನ್ನ ಕನಸೂ ಹೌದು, ದುಃಸ್ವಪ್ನವೂ ಹೌದು. ಈಗಲೇ ಜನ ಒಂದು ಸಿನಿಮಾ ಮಾಡಲು ಮೂರು ವರ್ಷ ತೆಗೆದುಕೊಳ್ಳುತ್ತಾನೆ ಎಂದು ದೂರುತ್ತಾರೆ.
ಇನ್ನು ಮಹಾಭಾರತ ಮಾಡಿದರೆ 20 ವರ್ಷ ತೆಗೆದುಕೊಂಡನಲ್ಲ ಎಂದಾರು. ಹೀಗಾಗಿ ಮಹತ್ವಾಕಾಂಕ್ಷೆಯ ಜೊತೆಗೆ ಅಳುಕೂ ಇರುವುದರಿಂದ ಆ ಸಿನಿಮಾ ಮಾಡುವುದು ಸುಲಭವಲ್ಲ' ಎಂದಿದ್ದಾರೆ ಅಮೀರ್.
ಚಿಕ್ಕಂದಿನಲ್ಲಿ ಅಮೀರ್ ತಾಯಿ ಅವರನ್ನು ಕೃಷ್ಣ ಎಂದೇ ಕರೆಯುತ್ತಿದ್ದರಂತೆ. ಯಾಕೆಂದರೆ ಅವರನ್ನು ಹುಡುಗಿಯರು ಮುತ್ತುತ್ತಿದ್ದದ್ದೇ ಹೆಚ್ಚು. ಅದನ್ನು ನೆನಪಿಸಿಕೊಂಡು ಕೆನ್ನೆ ಕೆಂಪಾಗಿಸಿಕೊಳ್ಳುವ ಅಮೀರ್ ಮಹಾಭಾರತ ಮಾಡುವ ಬಯಕೆಯನ್ನಂತೂ ಉಜ್ಜುತ್ತಿದ್ದಾರೆ.
`ತಲಾಶ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಹರ್ಷಗೊಂಡಿರುವ ಅವರಿಗೆ `ಸತ್ಯಮೇವ ಜಯತೇ' ಕಾರ್ಯಕ್ರಮದ ಇನ್ನೊಂದಷ್ಟು ಕಂತುಗಳನ್ನು ಮಾಡುವ ಆಸೆಯೂ ಇದೆ. ಈ ಹಿಂದೆ ಪ್ರಸಾರವಾದ ಒಂದು ಕಂತಿನಲ್ಲಿ ದಯಾಮರಣದ ಕುರಿತು ಮಾತನಾಡಿದ್ದ ಒಬ್ಬನು ಹತ್ಯೆಗೀಡಾದ ಪ್ರಸಂಗ ನಡೆಯಿತು. ಅದರ ಕುರಿತು ಬೇಸರ ವ್ಯಕ್ತಪಡಿಸುವ ಅಮೀರ್ಗೆ ರಾಜಕೀಯ ರಂಗ ಪ್ರವೇಶಿಸುವ ಇಚ್ಛೆಯೇನೂ ಇಲ್ಲವಂತೆ.