ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ ಮಹೋತ್ಸವದ ಬೆಳಕಲ್ಲಿ ವಿದ್ಯಾಭವನ

Last Updated 13 ಜುಲೈ 2012, 19:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯ ಸಂಗ್ರಾಮದ ಚಳವಳಿಯು ಕಾವೇರುತ್ತಿದ್ದ ಕ್ಷಣಗಳು ಅವು. ಎಲ್ಲೆಲ್ಲೂ ಬ್ರಿಟಿಷರ ಬೂಟಿನ ಸದ್ದು. ಸ್ವಾತಂತ್ರ್ಯ ಚಳವಳಿಗಾರರ ಹೋರಾಟವೂ ತೀವ್ರಗೊಂಡಿತ್ತು...

ಅಂತಹ ಕಾಲದಲ್ಲಿ ಯುವ ಜನತೆಗೆ ದೇಶ ಭಕ್ತಿಯ ರಸವನ್ನು ಉಣಿಸಲು, ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು, ದೇಶದ ಮಕ್ಕಳಿಗೆ ಭಾರತೀಯ ಮೌಲ್ಯಗಳನ್ನು ಒಳಗೊಂಡ ಶಿಕ್ಷಣ ನೀಡುವ ನಿಟ್ಟಿನಲ್ಲಿ 1938ರಲ್ಲಿ ಡಾ.ಕೆ.ಎಂ.ಮುನ್ಷಿ `ಭಾರತೀಯ ವಿದ್ಯಾಭವನ~ ಸ್ಥಾಪಿಸಿದರು.

1938ರಲ್ಲಿ ಸ್ಥಾಪನೆಯಾದ ವಿದ್ಯಾಭವನವು ದೇಶ ಹಾಗೂ ವಿದೇಶಗಳಲ್ಲಿ 115 ಕೇಂದ್ರಗಳನ್ನು  ಹೊಂದಿದೆ. ನಾಲ್ಕುನೂರಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ನಡೆಸುತ್ತಾ ಬಂದಿದೆ.

1965ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾದ ಭವನದ ಕೇಂದ್ರವು ಕರ್ನಾಟಕದಲ್ಲಿ ಮೊದಲನೆಯದು. ಭವನವು ಅಂದಿನಿಂದಲೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ನಾಟ್ಯ, ಸಂಗೀತ ಮತ್ತು ಇತರೆ ಭಾರತೀಯ ಕಲೆಗಳನ್ನು ಮಕ್ಕಳಿಗೆ ಕಲಿಸುವಂತಹ ತರಗತಿಗಳನ್ನು ನಡೆಸಿಕೊಂಡು ಬರುತ್ತಿದೆ.
 
ಅಲ್ಲದೇ, ಸಂಸ್ಕೃತ ಭಾಷೆಯನ್ನು ಮತ್ತು ನಮ್ಮ ದೇಶದ ಆಧ್ಯಾತ್ಮಿಕ ಮೌಲ್ಯಗಳನ್ನು ಜನರಿಗೆ ತಲುಪಿಸುವತ್ತ ಅನೇಕ ತರಬೇತಿಗಳನ್ನು ನೀಡುತ್ತಿದೆ. ಅಲ್ಲದೇ, 2000ಕ್ಕೂ ಹೆಚ್ಚಿನ ಪ್ರಕಟಣೆಗಳನ್ನು ಹೊರತಂದಿದೆ.

ಸ್ವಾತಂತ್ರ್ಯ ಭಾರತದಲ್ಲಿ ದೇಶದ ಶಿಕ್ಷಣ ಹೇಗಿರಬೇಕು, ದೇಶದ ಮಕ್ಕಳಿಗೆ  ಯಾವ ರೀತಿಯ ಮೌಲ್ಯಯುತ ಶಿಕ್ಷಣ ನೀಡಬೇಕು ಎಂಬುದನ್ನು ಅರಿತಿದ್ದವರು ಡಾ.ಕೆ.ಎಂ.ಮುನ್ಷಿ. ಇತ್ತೀಚೆಗೆ ಭವನದ ಸಂಸ್ಥಾಪಕರಾದ ಕುಲಪತಿ ಡಾ.ಕೆ.ಎಂ.ಮುನ್ಷಿಯವರ 125ನೇ ವರ್ಷಾಚರಣೆ ಮತ್ತು `ಭಾರತೀಯ ವಿದ್ಯಾಭವನ~ದ ಅಮೃತೋತ್ಸವ ಆಚರಣೆ ನಡೆಯಿತು.

ಭಾರತೀಯ ವಿದ್ಯಾಭವನದ ಮೂಲಮಂತ್ರವೇ `ವಸುದೈವ ಕುಟುಂಬಕಂ~, `ಸರ್ವ ಧರ್ಮ ಸಮಭಾವ~, `ಎಲ್ಲ ಒಳ್ಳೆಯ ಮತ್ತು ಉತ್ತಮ ಅಂಶಗಳು ನಮ್ಮಲ್ಲಿ ಮಿಳಿತವಾಗಲಿ~ ಎಂಬುದು.

ಅಮೃತ ಮಹೋತ್ಸವದ ಅಂಗವಾಗಿ ಭವನವು ಒಟ್ಟು 75 ಕಾರ್ಯಕ್ರಮಗಳನ್ನು ಆಯೋಜಿಸಿದೆ. ನೃತ್ಯ, ಸಂಗೀತ, ನಾಟಕ ಮತ್ತು ಹತ್ತು ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಕರ್ನಾಟಕ ಸಂಗೀತ  ಮತ್ತು ನೃತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನಿಂದ ಈ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನೆರವೇರಿಸುತ್ತಿದೆ.

ನಗರದ ಭಾರತೀಯ ವಿದ್ಯಾಭವನವು  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಒಡಗೂಡಿ ಶ್ರೀರಾಂಪುರದಲ್ಲಿ `ಬಿಬಿಎಂಪಿ ಭವನ ಪಬ್ಲಿಕ್ ಶಾಲೆ~ ಸ್ಥಾಪಿಸಿದೆ. ಅಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಸಮಾಜದಲ್ಲಿ ಹಿಂದುಳಿದ ಮಕ್ಕಳಿಗೆ ಸಿಬಿಎಸ್‌ಇ ಪಾಠ ಹೇಳಿಕೊಡಲಾಗುತ್ತದೆ.

ಶಾಲೆಯಲ್ಲಿ ಇಂದಿನ ಪ್ರಸ್ತುತ ಶಿಕ್ಷಣದ ಜತೆಗೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವಂತಹ ಎಲ್ಲ ರೀತಿಯ ಶಿಕ್ಷಣವನ್ನು ನೀಡಲಾಗುತ್ತಿದೆ. ಗ್ರಂಥಾಲಯ, ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರದ ಜತೆಗೆ ಶಾಸ್ತ್ರೀಯ ಮತ್ತು ಹಿಂದೂಸ್ತಾನಿ ಸಂಗೀತ, ಭರತನಾಟ್ಯ, ಕಥಕ್, ಪೇಂಟಿಂಗ್, ಯೋಗ ಮತ್ತು ಧ್ಯಾನಗಳನ್ನು ಕಲಿಸಲಾಗುತ್ತದೆ.

ಅಮೃತ ಮಹೋತ್ಸವದ ಅಂಗವಾಗಿ ಈ ವರ್ಷ ಕೇಂದ್ರದಲ್ಲಿ ನೂತನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಕೆ.ಎಂ.ಮುನ್ಷಿಯವರಿಗೆ ಅತ್ಯಂತ ಪ್ರಿಯವಾಗಿದ್ದ ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ `ಕುಲಪತಿ ಡಾ.ಕೆ.ಎಂ.ಮುನ್ಷಿ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್~ ಸ್ಥಾಪನೆ. ಉತ್ತಮ ಆಡಳಿತ ಕುರಿತ ಜಾಗೃತಿಗಾಗಿ `ಕುಲಪತಿ ಡಾ. ಕೆ.ಎಂ.ಮುನ್ಷಿ ಫೋರಂ ಫಾರ್ ಗುಡ್ ಗವರ್ನೆನ್ಸ್~ ಸ್ಥಾಪನೆ.

ಬೆಂಗಳೂರು ಶ್ರೀರಾಮಪುರದ ಭವನ್-ಬಿಬಿಎಂಪಿ ಪಬ್ಲಿಕ್ ಸ್ಕೂಲ್‌ನಲ್ಲಿ `ಗಾಂಧಿ ಸೆಂಟರ್ ಫಾರ್ ಕಂಪ್ಯೂಟರ್ ಲರ್ನಿಂಗ್~ ಸ್ಥಾಪನೆ. ಟೆಲಿವಿಶನ್ ಕಾರ್ಯಕ್ರಮ ತಯಾರಿಕೆ ಶಿಕ್ಷಣಕ್ಕಾಗಿ `ಡಾ.ಕೆ.ಎಂ.ಮುನ್ಷಿ ಇನ್‌ಸಿಟ್ಯೂಟ್~ ಕಾರ್ಯಾರಂಭ ಮಾಡಲಿವೆ.
ಭಾರತೀಯ ವಿದ್ಯಾಭವನದ ಮೊದಲ ಕುಲಪತಿ, ಸ್ಥಾಪಕ ಡಾ.ಕೆ.ಎಂ.ಮುನ್ಷಿಯವರಿಗೆ ಶಿಕ್ಷಣದ ಬಗೆಗಿದ್ದ ಕಾಳಜಿ ಅಪಾರ.

ಈ ಕುರಿತು ಅವರು ಹೀಗೆ ಹೇಳುತ್ತಿದ್ದರು: `ಶಿಕ್ಷಣವು ಯಾಂತ್ರಿಕವಾಗಿರಬಾರದು. ಅದರಲ್ಲಿ ಜೀವಂತಿಕೆ ಇರಬೇಕು. ದೇಶಕ್ಕೆ ಒಬ್ಬ ಎಂಜಿನಿಯರ್, ವಿಜ್ಞಾನಿ ದೊರೆತರೆ ಸಾಲದು. ಒಬ್ಬ ಒಳ್ಳೆಯ ನಾಗರಿಕ ಮತ್ತು ಒಳ್ಳೆಯ ಮನುಷ್ಯನನ್ನು ಸೃಷ್ಟಿ ಮಾಡುವುದೇ ನಿಜವಾದ ಶಿಕ್ಷಣ. ಆಗಲೇ ಆ ಶಿಕ್ಷಣದ ಉದ್ದೇಶ ಸಾರ್ಥಕವಾಗಲು ಸಾಧ್ಯವಾಗುತ್ತದೆ~ ಎಂದಿದ್ದರು.

`ಸ್ಥಾಪಿತವಾದ 75 ವರ್ಷಗಳಿಂದ ಭಾರತೀಯ ವಿದ್ಯಾಭವನವು ಶಿಕ್ಷಣ, ಸಂಸ್ಕೃತಿಗಾಗಿ ಶ್ರಮಿಸುತ್ತ ಬಂದಿದೆ. ಭವನವು ಇದುವರೆಗೂ ಸ್ಥಾಪಿತಗೊಂಡಿರುವ ಉದ್ದೇಶದಂತೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಇದು ಸಂತಸದ ವಿಚಾರ. ಮುಂದೆಯೂ ಸಂಸ್ಥೆ ಭಾರತೀಯ ಸಂಸ್ಕೃತಿ ಬಿಂಬಿಸುವಂತಹ ಕಾರ್ಯಗಳನ್ನು ಮಾಡುತ್ತದೆ~ ಎನ್ನುತ್ತಾರೆ ನಿರ್ದೇಶಕ ಎಚ್.ಎನ್.ಸುರೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT