ಧಾರವಾಡ: ‘ನಮ್ಮ ಜೀವ ಭೂಮಿಯ ಮೇಲೆ ಯಾವ ಕಾರಣಕ್ಕಾಗಿ ಹುಟ್ಟಿದೆ ಎಂಬುದನ್ನು ನಾವು ಆತ್ಮವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ’ ಎಂದು ಆಚಾರ್ಯ ಅಮೃತಸೇನ ಮಹಾರಾಜರು ಹೇಳಿದರು.
ಇಲ್ಲಿನ ಹೊಸಯಲ್ಲಾಪುರದಲ್ಲಿರುವ ಆದಿನಾಥ ದಿಗಂಬರ ಜೈನ ಬಸದಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಮೃತಸೇನ ಮಹಾರಾಜರ ನಿಯಮ ಸಲ್ಲೇಖನ ವೃತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಇಂದು ನಾವು ದಿನನಿತ್ಯ ಒತ್ತಡದ ಬದುಕನ್ನು ಸಾಗಿಸುತ್ತಿದ್ದೇವೆ. ಮರಣ ಹೊಂದುವಾಗ ನಾವು ಇಲ್ಲಿಂದ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ವ್ಯಾಮೋಹ ಎಂಬುದು ನಮಗೆ ಅಂಟಿಕೊಂಡುಬಿಟ್ಟಿದೆ. ನಮ್ಮ ಜೀವದ ಬಗ್ಗೆ ನಮಗೆ ಸಂಸ್ಕಾರ ಇರಬೇಕು. ನಮ್ಮ ಆತ್ಮಶುದ್ಧಿಗೋಸ್ಕರ ಏತಕ್ಕಾಗಿ ನಾವು ಭೂಮಿಯ ಮೇಲೆ ಹುಟ್ಟಿದ್ದೇವೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದರು.
‘ಒಬ್ಬ ಶಿಕ್ಷಕರ ಹತ್ತಿರ ಒಬ್ಬ ವಿದ್ಯಾರ್ಥಿಯನ್ನು ನೀಡಿದರೆ, ಆತ ಉತ್ತಮ ಸಂಸ್ಕಾರವನ್ನು ಕಲಿಯುತ್ತಾನೆ. ರೈತನ ಕೈಗೆ ಭೂಮಿಯನ್ನು ನೀಡಿದರೆ ಆತ ಹೊಲವನ್ನು ಸ್ವಚ್ಛಗೊಳಿಸಿ ಅಲ್ಲಿ ಉತ್ತಮ ಫಸಲನ್ನು ಪಡೆಯುತ್ತಾನೆ. ಅದೇ ರೀತಿ ಒಬ್ಬ ಕುಂಬಾರನಿಗೆ ಮಣ್ಣನ್ನು ಕೊಟ್ಟರೆ ಆತ ಒಳ್ಳೆಯ ಗಡಿಗೆಯನ್ನು ಮಾಡುತ್ತಾನೆ. ಈ ರೀತಿಯಾಗಿ ಒಂದೊಂದು ವಸ್ತುಗಳು ಉತ್ತಮ ಸಂಸ್ಕಾರವನ್ನು ಪಡೆದುಕೊಳ್ಳುತ್ತವೆ. ಅದೇ ರೀತಿ ನಾವು ದೇವರ ಅನುಗ್ರಹದಿಂದ ಉತ್ತಮ ಸಂಸ್ಕಾರ ಪಡೆಯುವಂತಾಗಬೇಕು. ಇದರ ಮೂಲಕ ನಮ್ಮ ಜೀವನವನ್ನು ನಾವು ಸಾರ್ಥಕಪಡಿಸಿಕೊಳ್ಳಬೇಕು. ಅಂದಾಗ ನಮಗೆ ಜೀವನದ ಬೆಲೆ ಗೊತ್ತಾಗುತ್ತದೆ’ ಎಂದು ತಿಳಿಸಿದರು.
ನಿಜಾನಂದ ಮಹಾರಾಜ ಮಾತನಾಡಿ, ‘ಮದುವೆ ಹಾಗೂ ಶಿಕ್ಷೆ ಎಂಬ ಶಬ್ದಗಳ ಮಧ್ಯೆ ಸಾಕಷ್ಟು ಅಂತರವಿದೆ. ಈ ಎರಡೂ ಶಬ್ದಗಳಲ್ಲಿ ಒಂದು ಸರಳ ಹಾಗೂ ಇನ್ನೊಂದು ಕಠಿಣವಾಗಿದೆ. ಈ ರೀತಿಯಾದಂತ ಸರಳ ಸಂದೇಶವನ್ನು ಸಾರುವುದೇ ಧರ್ಮದ ತತ್ವವಾಗಿದೆ. ಈ ಜೀವಕ್ಕೆ ಮೋಕ್ಷ ದೊರಕಬೇಕಾದರೆ ಬಸ್ತಿ ಹಾಗೂ ಮಂದಿರಗಳಲ್ಲಿ ಧ್ಯಾನಾಸಕ್ತರಾಗಬೇಕು. ಆಸೆ, ಆಕಾಂಕ್ಷೆಗಳನ್ನು ನಾವು ತ್ಯೆಜಿಸಬೇಕು’ ಎಂದು ಅವರು ತಿಳಿಸಿದರು.
ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಗುಣಧರನಂದಿ ಸ್ವಾಮೀಜಿ. ಹು–ಡಾ ಮಾಜಿ ಅಧ್ಯಕ್ಷ ದತ್ತಾ ಡೋರ್ಲೆ, ಜಿನೇಂದ್ರ ಪ್ರಸಾದ್ ಇತರರು ಇದ್ದರು.
ಸಲ್ಲೇಖನ ವೃತ
ದಿಗಂಬರ ಪಂಥದ ಮುನಿಗಳು ದಿನೇ ದಿನೇ ಆಹಾರ, ನೀರು ತ್ಯಾಗ ಮಾಡುತ್ತಾ ದೇಹಾರ್ಪಣೆ ಮಾಡುವ ಪ್ರಕ್ರಿಯೆಯೇ ಸಲ್ಲೇಖನ ವೃತ. ಈ ವೃತ ಸ್ವೀಕರಿಸಿದ ಮುನಿಗಳು ಕ್ರಮೇಣ ಅನ್ನ, ನೀರು ಬಿಡುತ್ತಾ ದಿನ ಕಳೆಯುತ್ತಾರೆ. ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಮುನಿಯೊಬ್ಬರು ಸಲ್ಲೇಖನ ವೃತ ಸ್ವೀಕರಿಸಿದ್ದರು. 22 ದಿನಗಳ ನಂತರ ದೇಹಾಂತ್ಯವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.