ಬೆಂಗಳೂರು: ಜೀವವೈವಿಧ್ಯ ಕಾಪಾಡುವ ಸಂಬಂಧ ಜಾಗತಿಕ ಮಟ್ಟದಲ್ಲಿ ರೂಪಿಸಲಾಗಿರುವ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸದ ಅಮೆರಿಕ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಜೀವವೈವಿಧ್ಯ ಸಂರಕ್ಷಣೆ ಕಾರ್ಯಕ್ಕೆ ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಈ ಕ್ರಮ ಒಂದು ಪರಿಹಾರ ಆಗಬಲ್ಲದು ಎಂದೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರು ಮಂಗಳವಾರ ಮೌಖಿಕವಾಗಿ ಹೇಳಿದರು.
ಅರ್ಜಿಯಲ್ಲಿ ಏನಿದೆ?: 2009ರ ಅಕ್ಟೋಬರ್ 26ರಂದು ಅಧಿಸೂಚನೆಯೊಂದನ್ನು ಹೊರಡಿಸಿರುವ ಕೇಂದ್ರ ಸರ್ಕಾರ 190 ಸಸ್ಯಗಳನ್ನು ವಾಣಿಜ್ಯ ಉದ್ದೇಶಕ್ಕೆ ಸಾಮಾನ್ಯವಾಗಿ ಬಳಕೆಯಾಗುವ ವಸ್ತುಗಳ ಪಟ್ಟಿಗೆ ಸೇರಿಸಿದೆ. ಈ ಪೈಕಿ 18 ಸಸ್ಯಗಳು ಈಗಾಗಲೇ ಅಳಿವಿನ ಅಂಚಿನಲ್ಲಿವೆ. ಈ ಅಧಿಸೂಚನೆಯಿಂದ ಕೆಲವು ಭಾರತೀಯ ಮತ್ತು ವಿದೇಶಿ ಕಂಪೆನಿಗಳಿಗೆ ಮಾತ್ರ ಲಾಭವಾಗುತ್ತದೆ.
ದೇಶದ ಬೊಕ್ಕಸಕ್ಕಾಗಲಿ, ಈ ಸಸ್ಯಗಳನ್ನು ಸಂರಕ್ಷಿಸುತ್ತಿರುವ ಸ್ಥಳೀಯರಿಗಾಗಲಿ ಯಾವುದೇ ಲಾಭ ಇಲ್ಲ. ಈ ಅಧಿಸೂಚನೆಯನ್ನು ರದ್ದು ಮಾಡಬೇಕು ಎಂದು ಕೋರಿ `ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್~ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ನವೆಂಬರ್ 20ಕ್ಕೆ ಮುಂದೂಡಿದೆ.