ವಿರಾಜಪೇಟೆ: ಇಲ್ಲಿಗೆ ಸಮೀಪದ ಅಮ್ಮತ್ತಿ ವಿಭಾಗದ ರೈತರು ಹಾಗೂ ಗ್ರಾಮಸ್ಥರಿಗೆ ಕಂದಾಯ ಕಚೇರಿಯಿಂದ ಆಗುತ್ತಿರುವ ಅನನುಕೂಲ ಖಂಡಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಂಗಳವಾರ ಬೆಳಿಗ್ಗೆ ಅಮ್ಮತ್ತಿಯ ಕಂದಾಯ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಸಮಸ್ಯೆಗಳ ನಿವಾರಣೆ ಹಾಗೂ 10 ಬೇಡಿಕೆಗಳ ಈಡೇರಿಕೆಗಾಗಿ ತಹಶೀಲ್ದಾರರಿಗೆ 30 ದಿನಗಳ ಗಡುವು ನೀಡಲಾಯಿತು.
ಅಮ್ಮತ್ತಿ ಹಿರಿಯರ ವಿಶ್ರಾಂತಿ ಕೇಂದ್ರ, ರೈತ ಸಂಘ ಮತ್ತು ನಾಗರಿಕರ ವತಿಯಿಂದ ಈ ಪ್ರತಿಭಟನೆ ನಡೆಯಿತು. ಅಮ್ಮತ್ತಿ ಕಂದಾಯ ಕಚೇರಿಯಲ್ಲಿ ಸಮಯ ಪರಿಪಾಲನೆ ಆಗುತ್ತಿಲ್ಲ. ಸಿಬ್ಬಂದಿ ವರ್ಗದ ಉದಾಸೀನತೆಯಿಂದ ಕಡತಗಳು ಶೀಘ್ರ ವಿಲೇವಾರಿಯಾಗುತ್ತಿಲ್ಲ.
ಸಕಾಲ ಯೋಜನೆಯ ನಾಮಫಲಕ ಆಳವಡಿಸುವುದು, ಸರ್ಕಾರ ಘೋಷಿಸಿರುವ ಪರಿಹಾರದ ಶೀಘ್ರ ವಿತರಣೆ, ಬಿಪಿಎಲ್ನ ಅನಧಿಕೃತ ಬಳಕೆದಾರರನ್ನು ಗುರುತಿಸಿ ಕ್ರಮ ಕೈಗೊಳ್ಳುವುದು, ಪಶುವೈದ್ಯ ಶಾಲೆಯನ್ನು ಕೇಂದ್ರ ಸ್ಥಾನದಲ್ಲಿ ಉಳಿಸಿಕೊಂಡು ಅಗತ್ಯ ವೈದ್ಯರನ್ನು ನೇಮಕ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾಕಾರರು ಒತ್ತಾಯಿಸಿದರು. ಕಂದಾಯ ಕಚೇರಿಯಲ್ಲಿ ಮನವಿ ಸ್ವೀಕರಿಸಿದ ತಹಶೀಲ್ದಾರ್ ಜಿ.ಎಸ್. ಕೃಷ್ಣ ಬೇಡಿಕೆಗಳನ್ನು ಪರಿಶೀಲಿಸಿ ಶೀಘ್ರದಲ್ಲಿ ಇತ್ಯರ್ಥಪಡಿಸಿ ಪರಿಹಾರ ಒದಗಿಸಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಸಂಘಟನೆಯ ಕೇಚಂಡ ಕುಶಾಲಪ್ಪ, ರೈತ ಸಂಘದ ಕಾವಾಡಿಚಂಡ ಗಣಪತಿ, ಹಿರಿಯರ ವಿಶ್ರಾಂತಿ ಕೇಂದ್ರದ ಅಧಕ್ಷ ಮೇಚಂಡ ದೇವಯ್ಯ ಮತ್ತು ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.