ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಮ್ಮನಹಬ್ಬ'ಕ್ಕೆ ಸಂಭ್ರಮದ ಸಿದ್ಧತೆ

ಮಲೇಬೆನ್ನೂರು: ಗ್ರಾಮದೇವತೆ ಉತ್ಸವಕ್ಕೆ ತಳಿರು ತೋರಣದ ಶೃಂಗಾರ
Last Updated 2 ಏಪ್ರಿಲ್ 2013, 8:26 IST
ಅಕ್ಷರ ಗಾತ್ರ

ಮಲೇಬೆನ್ನೂರು: ಪ್ರಸಕ್ತ ಸಾಲಿನ ಗ್ರಾಮದೇವತೆ ಒಂದು ವಾರದ ಉತ್ಸವಕ್ಕೆ ಗ್ರಾಮ ಸನ್ನದ್ಧವಾಗಿದ್ದು ನವ ವಧುವಿನಂತೆ ಬೀದಿಗಳು ತಳಿರು ತೋರಣ, ಬ್ಯಾನರ್‌ಗಳಿಂದ ಶೃಂಗರಿತವಾಗಿವೆ.

ಐತಿಹ್ಯ: ಗ್ರಾಮದೇವತೆ ಏಕನಾಥೇಶ್ವರಿ ಪುರಾಣ ಪ್ರಸಿದ್ಧಳು, ಹೊರವಲಯದಲ್ಲಿ ನೆಲೆ ನಿಂತು ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ.
ವಿಚಿತ್ರ ಎಂದರೆ ಮೂಲ ಗ್ರಾಮದೇವತೆ `ಕೋಡಿಮಾರೇಶ್ವರಿ'. ಹಳೆ ಊರಿನ ಪ್ರದೇಶವಾದ `ರಾಜನಗಿರಿ` ಜಮೀನಿನಲ್ಲಿರುವ ದೇವಾಲಯದಲ್ಲಿ ನೆಲೆಯಾಗಿದ್ದಾಳೆ.

ಇತಿಹಾಸದಲ್ಲಿ `ಏಕನಾಥೇಶ್ವರಿ' ಶತಮಾನಗಳ ಹಿಂದೆ ಚಿತ್ರದುರ್ಗದಿಂದ ತರಕಾರಿ ಮಾರುವವರ ಬುಟ್ಟಿಯಲ್ಲಿ ಗುಂಡುಕಲ್ಲಿನ ರೂಪದಲ್ಲಿ ಬಂದಳು.
ಗ್ರಾಮದ ಹೊರವಲಯದ ಗಡಿಯಲ್ಲಿ ತರಕಾರಿ ಮಾರುವವರ ಬುಟ್ಟಿ ಭಾರವಾದಾಗ ಬುಟ್ಟಿ ಇಳಿಸಿದ ತಕ್ಷಣ ಗುಂಡು ಉರುಳಿತು ಎಂಬುದು ಐತಿಹ್ಯ.

ಇದಕ್ಕೆ ಇಂಬು ಕೊಟ್ಟಂತೆ ಹೆಳವನಕಟ್ಟೆ ಗಿರಿಯಮ್ಮ ತಮ್ಮ ಕೃತಿಯಲ್ಲಿ ತಮ್ಮ ಮನೆ ದೇವರಾದ ಏಕನಾಥೇಶ್ವರಿಯನ್ನು `ರಕ್ಷಿಸುಯೆನ ತಾಯೆ ದಯೆದಿಂದೆನ್ನನು... ಮಲ್ಲಾರ ಮಹಿಷಾಸುರನ ಕೊಂದೆ ಮಲೇಬೆನ್ನೂರಿನಲ್ಲಿ ನಿಂತೆ `ಎಂದು  ಹಾಡಿ ಹೊಗಳಿರುವುದು ದೇವತೆ ದೇವಾಲಯದ ಅಸ್ತಿತ್ವ ಸೂಚಿಸುತ್ತಿದೆ.

ಈಚೆಗೆ ಪುರಾತನ ದೇವಾಲಯ ಶಿಥಿಲವಾದಾಗ, ನಕ್ಷತ್ರಾಕಾರದಲ್ಲಿ  ಭಕ್ತರ ಸಹಕಾರದೊಂದಿಗೆ 2000ನೇ ಇಸವಿಯಲ್ಲಿ ಹೊರಗಿನಮ್ಮನ ದೇವಾಲಯ ಹೊಸದಾಗಿ  ನಿರ್ಮಿಸಿದ್ದಾರೆ.

ಪುರಾತನ ವಿಗ್ರಹ ನಾಗರಹೆಡೆ ಕೆಳಗೆ ಗುಂಡುಕಲ್ಲುಗಳಿದ್ದವು. ಏಕನಾಥೇಶ್ವರಿ ಸುಬ್ರಹ್ಮಣ್ಯ ಪರಶುರಾಮ ಇದ್ದರು ಎಂದು ಹಿರಿಯರು ಮಾಹಿತಿ ನೀಡಿದರು. ಪ್ರಸ್ತುತ ದೇವಿ ವಿಗ್ರಹ ಕತ್ತಿ ಹಿಡಿದು ನಿಂತಿದ್ದಾಳೆ.

ಅದರಂತೆ ಊರಿನ ಒಳಭಾಗದಲ್ಲಿ ಏಕನಾಥೇಶ್ವರಿ, ಕೋಡಿಮಾರೇಶ್ವರಿ ಉತ್ಸವ ಮೂರ್ತಿ ಹಾಗೂ ದೇವಾಲಯಗಳಿವೆ. ಹಟ್ಟಿ ದುರ್ಗಮ್ಮ, ಕಾಳಿಕಾಂಬಾ, ಚೌಡೇಶ್ವರಿ, ಕನ್ನಿಕಾಪರಮೇಶ್ವರಿ, ಗಂಗಮಾಳಮ್ಮ  ಶಕ್ತಿ ದೇವತೆ ದೇವಾಲಯಗಳಿವೆ.

ಉತ್ಸವಕ್ಕೆ ಸಿದ್ಧತೆ: ಪ್ರಸಕ್ತ ಸಾಲಿನ  ಗ್ರಾಮದೇವತೆ ಉತ್ಸವ `ಅಮ್ಮನ ಹಬ್ಬ'ಕ್ಕೆ  ಸಂಪೂರ್ಣಗ್ರಾಮ ಶೃಂಗರಿತವಾಗಿದೆ.
ಉತ್ಸವ ಸಾಗಿ ಬರುವ ರಾಜಬೀದಿ ಸಂಪೂರ್ಣ ಕಾಂಕ್ರೀಟ್ ಹಾಕಿದ್ದು ಉತ್ಸವ ಸಾಗಿ ಬರಲು ಅನುಕೂಲವಾಗಿದೆ.

2 ಬದಿಗೆ ವಿದ್ಯುತ್ ದೀಪದಿಂದ ಅಲಂಕರಿಸಲಾಗಿದೆ. ಗ್ರಾಮದ ಎಲ್ಲ ದೇವಾಲಯ ಸುಣ್ಣಬಣ್ಣಗಳಿಂದ ಅಲಂಕೃತಗೊಂಡಿದ್ದು, ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಗ್ರಾಮದ ಮನೆಮನೆಗಳಲ್ಲಿ ಹೆಣ್ಣು ಮಕ್ಕಳು, ಬೀಗರು, ಬಂಧುಗಳು ಆಗಮಿಸಿದ್ದಾರೆ. ಬಟ್ಟೆ ಅಂಗಡಿ ಗಿಜಿಗುಡುತ್ತಿವೆ. ಬಾಡೂಟಕ್ಕೆ ಭರ್ಜರಿ ಸಿದ್ಧತೆ, ಅಲ್ಲಲ್ಲಿ ಸಿಹಿತಿಂಡಿ ತಯಾರಿ ಭರ್ಜರಿಯಾಗಿ ಸಾಗಿದ್ದು ಸುವಾಸನೆ ಹರಡಿದೆ.

ಒಂದು ವಾರಕಾಲ ವಿಶೇಷ ಪೂಜೆ, ಹಾಸ್ಯಗಾರರಿಂದ ಮನೋರಂಜನೆ, ಗುರುವಾರದ ಸಂತೆ ಗ್ರಾಮದ ಒಳಗೆ ಏರ್ಪಡಿಸಿದೆ.
ಶುಕ್ರವಾರ ಹುಲುಸು ಒಡೆದ ನಂತರ ಉತ್ಸವಕ್ಕೆ ತೆರೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT