ಲಖನೌ (ಪಿಟಿಐ): ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿಗದಿಪಡಿಸಿದ್ದ ಅವಧಿಯನ್ನು ಬುಧವಾರ ಅಲಹಾಬಾದ್ ಹೈಕೋರ್ಟ್ ಮೇ 31ರವರೆಗೆ ವಿಸ್ತರಿಸಿದೆ.ನ್ಯಾಯಮೂರ್ತಿಗಳಾದ ಎಸ್.ಯು ಖಾನ್, ಸುಧೀರ್ ಅಗರ್ವಾಲ್ ಮತ್ತು ವಿ.ಕೆ. ದೀಕ್ಷಿತ್ ಅವರನ್ನೊಳಗೊಂಡ ವಿಶೇಷ ಪೂರ್ಣಪೀಠ ವಿವಾದಿತ ಸ್ಥಳದಲ್ಲಿ ಮೇ 31ರವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.
ಅಯೋಧ್ಯೆ ತೀರ್ಪಿನ ಕುರಿತು ರಾಜೇಂದ್ರ ಸಿಂಗ್, ನಿರ್ಮೋಹಿ ಅಖಾಡ ಮತ್ತು ಭಗವಾನ್ ರಾಮ್ಲಾಲಾ ವಿರಾಜಮಾನ್ ಹೂಡಿದ ಮೊಕದ್ದಮೆಗಳನ್ನು ಪರಾಮರ್ಶಿಸುವಂತೆ ಸ್ಥಳೀಯ ವಕೀಲ ಎಂ. ಇಸ್ಮಾಯಿಲ್ ಫಾರೂಕಿ ಸಲ್ಲಿಸಿದ್ದ ಅರ್ಜಿಮೇಲಿನ ತೀರ್ಪನ್ನು ಪೀಠ ಕಾಯ್ದಿರಿಸಿತು. ಪೂರ್ಣಪೀಠದ ಮುಂದಿನ ವಿಚಾರಣೆ ಏ.28ರಂದು ನಡೆಯಲಿದೆ. ಸೆ. 30ರಂದು ವಿವಾದಿತ ಪ್ರದೇಶವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿ ಹಿಂದೂ ಮತ್ತು ಮುಸ್ಲಿಮರಿಗೆ ಹಂಚಲಾಗಿತ್ತು.ಬಗ್ಗೆ ನ್ಯಾಯಾಲಯ ತೀರ್ಪು ನೀಡಿದ ವೇಳೆ ಮೇಲ್ಮನವಿ ಸಲ್ಲಿಸಲು ಮೂರು ತಿಂಗಳ ಕಾಲ ಕಾಲಾವಕಾಶ ನೀಡಿತ್ತು. ಅಲ್ಲದೆ ವಿವಾದಿತ ಪ್ರದೇಶದಲ್ಲಿ ಫೆ.15ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆಯೂ ನಿರ್ದೇಶಿಸಿತ್ತು.