ಸಿಂಧನೂರು: ‘ನನ್ನ ಮಗ್ನಿಗೆ ಅಯ್ಯಪ್ಪಮಾಲೆ ಹಾಕಬ್ಯಾಡ ಅಂತ ಪರಿಪರಿಯಾಗಿ ಹೇಳ್ದೆ; ನನ್ ಮಾತ್ ಕೇಳ್ಲಿಲ್ಲ’ ಎಂದು ಶಬರಿಮಲೆಯಲ್ಲಿ ಕಾಲ್ತುಳಿ ತದಿಂದ ಮೃತಪಟ್ಟಿರುವ ವಿಷ್ಣುಮೂರ್ತಿಯ ತಂದೆ ಬಾಬುರಾವ್ ಗೋಳಿಡುವ ದುಃಖದ ಪರಿ ಇದು.ಮಕರ ಸಂಕ್ರಾಂತಿಯ ಜ್ಯೋತಿಯ ದರ್ಶನದ ದಿನದಂದು ಶುಕ್ರವಾರ ನಡೆದ ದುರಂತದಲ್ಲಿ ತಾಲ್ಲೂಕಿನ ಬಾಲಯ್ಯಕ್ಯಾಂಪಿನ ಅಯ್ಯಪ್ಪಸ್ವಾಮಿ ಭಕ್ತ ಮೃತಪಟ್ಟಿದ್ದು, ಭಾನುವಾರ ಮಧ್ಯಾಹ್ನದವರೆಗೂ ಮಗನ ಶವ ಬರುವಿಗಾಗಿ ಕಾಯ್ದು ಕುಳಿತಿದ್ದ ತಂದೆ ಬಾಬುರಾವ್ ತಮ್ಮನ್ನು ಭೇಟಿಯಾದ ‘ಪ್ರಜಾವಾಣಿ’ ಯೊಂದಿಗೆ ಮಾತನಾಡುತ್ತಾ ದುಃಖಿಸಿದರು.
ಹೈದರಾಬಾದಿಗೆ ಕೆಲಸಕ್ಕೆಂದು ಹೋಗಿದ್ದ ವಿಷ್ಣು ಅಲ್ಲಿ ತನಗೆ ಊಟ ಸರಿ ಹೊಂದಲಿಲ್ಲ ಎಂದು ಕ್ಯಾಂಪಿಗೆ ಮರಳಿ ಬಂದಿದ್ದ. ಇಲ್ಲಿಯೇ ಹೊಸದೊಂದು ಕೆಲಸ ಹುಡುಕಲು ಪ್ರಯತ್ನಿಸುತ್ತಿದ್ದ. ಅಷ್ಟರಲ್ಲಿ ಶಬರಿಮಲೆಗೆ ಹೋಗುವ ಉದ್ದೇಶದಿಂದ ಮಾಲೆ ಹಾಕಿದ ವಿಷ್ಣು ಅಯ್ಯಪ್ಪನ ದರ್ಶನ ಪಡೆದು ಮರಳಿ ಬರಲಿಲ್ಲ ಎಂದು ಕಣ್ಣೀರಿಟ್ಟರು.ಮಧ್ಯಾಹ್ನ ಬಾಲಯ್ಯಕ್ಯಾಂಪಿಗೆ ಆಗಮಿಸಿದ ಶವವನ್ನು ನೆರೆಹೊರೆಯ ಕ್ಯಾಂಪಿನವರು, ಗ್ರಾಮಸ್ಥರು ಅತ್ಯಂತ ದು:ಖದಿಂದ ಬರ ಮಾಡಿಕೊಂಡರು. ಪೊಲೀಸರು, ಪತ್ರಕರ್ತರು, ಸಮಾಜ ಸೇವಾ ಸಂಘಟನೆಗಳು, ಸಂಘ-ಸಂಸ್ಥೆಗಳ ಮುಖಂಡರು, ರಾಜಕಾರಣಿಗಳು ಅಗಲಿದ ವಿಷ್ಣುವಿಗೆ ಅಂತಿಮ ನಮನ ಸಲ್ಲಿಸಿದರು.
ಮಧ್ಯಾಹ್ನ 3 ಗಂಟೆಗೆ ಜರುಗಿವ ವಿಷ್ಣುವಿನ ಅಂತ್ಯಕ್ರಿಯೆಯಲ್ಲಿ ತಹಸೀಲ್ದಾರ್ ಡಾ.ಶರಣಪ್ಪ ಸತ್ಯಂಪೇಟೆ, ಡಿ.ವೈ.ಎಸ್.ಪಿ.ಬಿ.ಡಿ.ಡಿಸೋಜಾ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ದೊಡ್ಡ ಬಸವರಾಜ, ಬಿ.ಜೆ.ಪಿ.ಅಧ್ಯಕ್ಷ ಕೆ.ಕರಿಯಪ್ಪ, ಜವಳಗೇರಾ ತಾ.ಪಂ.ಸದಸ್ಯ ಚಂದ್ರುಭೂಪಾಲ ನಾಡಗೌಡ, ರಾಜು ನಾಡಗೌಡ ಪಾಲ್ಗೊಂಡಿದ್ದರು.