ಆತ್ಮಹತ್ಯೆ ಮಾಡಿಕೊಂಡ ಮೇಲ್ಜಾತಿ ಮನಸ್ಸುಗಳ ಕಥೆಯನ್ನು ಕೆ. ವಿ. ಅಕ್ಷರ ಅವರ ಬರಹ (ಪ್ರವಾ. ಜ.16) ಹೇಳುತ್ತಿರಬಹುದೆ ಎಂದು ನನಗೆ ಅನಿಸುತ್ತಿದೆ. ಎಂಜಲೆಲೆ ಮೇಲೆ ಉರುಳು ಸೇವೆ ಮತ್ತು ಕ್ರಿಕೆಟ್ ಆಟಗಾರರ ಹರಾಜಿನ ಸಂಬಂಧದ ಮಾನಾಪಮಾನಗಳ ಬಗ್ಗೆ ಬರೆಯುತ್ತ ಅವರು ‘ನಮ್ಮದೇ ಸ್ವಂತ ಮಾನಾವಮಾನಗಳ ಪರಿಕಲ್ಪನೆಯೇ ಇನ್ನೂ ಹುಟ್ಟಿಲ್ಲವೇನೋ ಎಂಬ ಅನುಮಾನ’ ವ್ಯಕ್ತಪಡಿಸುತ್ತಾರೆ.
ಈ ಹೊತ್ತಿನ ಕ್ರಿಕೆಟಿಗರ ಹರಾಜು ಅವಮಾನಕ್ಕಿಂತ ಎಂಜಲೆಲೆ ಮೇಲೆ ಉರುಳು ಸೇವೆ ಮಾಡುವುದು ಹೆಚ್ಚಿನ ಅವಮಾನ ಅಲ್ಲ ಅಂಬೋಣವಾದರೆ: ಇಂಡಿಯಾಕ್ಕೇ ಪ್ರತ್ಯೇಕವಾದ ಒಂದು ಮಾನವಮಾನ ಪರಿಕಲ್ಪನೆ ಹಿಂದೆ ಇತ್ತೆ, ಈಗ ಇಲ್ಲವೆಂದಾದರೆ (ನಮ್ಮನ್ನಾಳಿದ ವಸಾಹತುಶಾಹಿಯ ಮೇಲೆ ಎಲ್ಲಾ ಅಪರಾಧದ ಹೊರೆಯನ್ನು ಹೊರಿಸಿ!), ಅಂಥದೊಂದು ಮುಂದೆ ಬರಲು ಸಾಧ್ಯವೆ?
ಹಾಗಿದ್ದಲ್ಲಿ ಯಾವ ಬಗೆಯ ಭಾರತ ಸಮಾಜದಿಂದ ಅದನ್ನು ಅಕ್ಷರ ಅವರು ನಿರೀಕ್ಷಿಸುತ್ತಾರೆ? ಜಾತಿ - ಗೀತಿಗಳನ್ನೆಲ್ಲ ಕಳೆದು ಕೂಡಿದ ಮೇಲೆ ಅಥವಾ ಮೇಲು ಜಾತಿ ನಿರ್ಮಿತ ವ್ರತ, ಹರಕೆ ಇತ್ಯಾದಿಗಳು ಅವಮಾನವಲ್ಲ, ಅವು ಕೂಡ ಎಲ್ಲ ನಂಬಿಕೆಗಳಂತೆ ಒಂದು ನಂಬಿಕೆ ಎಂದು ಭಾವಿಸುವ ಹಕ್ಕು ತಳವರ್ಗದವರದು ಮತ್ತು ಅದನ್ನು ಮಾಧ್ಯಮದವರು ಮತ್ತು ಹೆಚ್ಚು ತಿಳಿದವರು ಪ್ರಶ್ನಿಸಬಾರದು ಎಂಬ ಎಕ್ಸ್ಟ್ರಾ ಕಾನೂನು ಜಾರಿಯಿಂದಲೇ?
ಈಗ ಭಾರತ ಚಿಂತನ ಪರವಾಗಿಯೆ ಮೇಲ್ಜಾತಿ ಮತ್ತು ತಳಕೆಳವರ್ಗಗಳ ಕಾರಣಕ್ಕೆ ಒಡೆದುಕೊಂಡಿರುವುದು ನಿಜ. ಈ ಎರಡೂ ವರ್ಗಗಳನ್ನು ಜೀವಪರವಾಗಿ ಕೂಡಿಸುವ ಪ್ರಯತ್ನ ನಡೆದಿರುವುದೂ ಸರಿ. ಆದರೆ ಈ ಯಾರೂ ತಮ್ಮ ಹೊಟ್ಟೆಯ ‘ಕಸವನ್ನು’ ತೆಗೆದು ಹಾಕಿ ಭಾರತವೆಂಬ ಕೂಸನ್ನು ಉಳಿಸಿಕೊಳ್ಳಬೇಕು ಎಂದು ಚಿಂತಿಸುತ್ತಿರುವಂತೆ ಕಾಣುತ್ತಿಲ್ಲ!! ತಮ್ಮ ತಮ್ಮ ಅಪರಾಧಗಳಿಗೆಲ್ಲ ವೈಜ್ಞಾನಿಕತೆಯ ಮತ್ತು ಸಾಂಸ್ಕೃತಿಕ ಅಸ್ತಿತ್ವದ ಬಣ್ಣ ಕೊಡುತ್ತ ಅಪಾರ ತಿಳಿವಿನ ನಂತರವೂ ಮತ್ತೆ ತಾವು ಹೊರಟ ಜಾಗಕ್ಕೆ ಬಂದು ಸೇರಿ ಅಲ್ಲಿಗೇ ಫಿಕ್ಸ್ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಕಂಡು ‘ಅಯ್ಯೋ ದೌರ್ಭಾಗ್ಯದ ಭಾರತವೆ’ ಅನಿಸುವುದಿಲ್ಲವೆ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.