ಹಾಸನ: ಅರಣ್ಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅರಸೀಕೆರೆ ಬಳಿ ನಡೆದಿದೆ. ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ದೊಡ್ಡಹಟ್ಟಿ ಗ್ರಾಮದ ರಾಮಯ್ಯ ಆತ್ಮಹತ್ಯೆಗೆ ಯತ್ನಿಸಿದವರು. ಈತನ ಕುಟುಂಬದವರ ಮೇಲೂ ಅರಣ್ಯ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಅಸ್ವಸ್ಥಗೊಂಡಿರುವ ರಾಮಯ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಹಲ್ಲೆಗೊಳಗಾದ ರಾಮಯ್ಯನ ಕುಟುಂಬದ ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಮಯ್ಯ ತನ್ನ 2 ಎಕರೆ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿ ಸು ತ್ತಿದ್ದ. ಈ ಭೂಮಿಯನ್ನು ಸರ್ಕಾರ ರಾಮಯ್ಯನ ಹೆಸರಿಗೆ ಮಂಜೂರು ಮಾಡಿದೆ. ಅದೇ ಆಸ್ತಿ ಮೇಲೆ ಈ ಕುಟುಂಬ ಸಾಲ ಪಡೆದು ಭೂಕಂದಾಯ ಪಾವತಿಸಿದೆ.
ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಎರಡು ಎಕರೆ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಕಿರುಕುಳ ನೀಡುತ್ತಿದ್ದರು. ಈ ಜಮೀನು ಬಿಟ್ಟು ಹೊರ ಹೋಗುವಂತೆ ತೊಂದರೆ ನೀಡುತ್ತಿದ್ದರು ಎಂದು ರೈತ ಕುಟುಂಬ ಆರೋಪಿಸಿದೆ.
ಭಾನುವಾರ ಜಮೀನಿನ ಬಳಿ ಆಗಮಿಸಿದ್ದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ರಾಮಯ್ಯ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯಿಂದ ಬೇಸತ್ತ ರಾಮಯ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಾವು ಬದುಕಿನ ನಡುವೆ ರಾಮಯ್ಯ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯು ತ್ತಿದ್ದು, ಈ ಘಟನೆಗೆ ಅರಣ್ಯ ಇಲಾಖೆಯೇ ಹೊಣೆ ಎಂದು ಅತನ ಕುಟುಂಬ ಆರೋಪಿಸಿದೆ.