ಸಿದ್ದಾಪುರ: ದಿಡ್ಡಳ್ಳಿ ಹಾಡಿಯಲ್ಲಿ ಮನೆ ನವೀಕರಣ ಕಾರ್ಯಕ್ಕೆ ತಡೆಯೊಡ್ಡಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗಿರಿಜನರು ಸೋಮವಾರ ಪ್ರತಿಭಟನೆ ನಡೆಸಿದರು.ಇಲ್ಲಿಗೆ ಸಮೀಪದ ದಿಡ್ಡಳ್ಳಿ ಗಿರಿಜನ ಹಾಡಿಯ ನಿವಾಸಿಗಳು ಅರಣ್ಯದೊಳಗಿನ ನಿರ್ಬಂಧಿತ ಪ್ರದೇಶದಲ್ಲಿ ಮನೆ ನವೀಕರಣಕ್ಕೆ ಸಿದ್ಧತೆಯಲ್ಲಿದ್ದಾಗ ಪರಿಶೀಲನೆಗೆ ತೆರಳಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಕ್ಕೆ ತಡೆಯೊಡ್ಡಿದರು.
ಅಧಿಕಾರಿಗಳ ಮಾತಿಗೆ ನಿವಾಸಿಗಳು ಮಣಿಯದೇ ಪ್ರತಿಭಟನೆ ನಡೆಸಿದರಲ್ಲದೇ ನವೀಕರಣ ಕಾಮಗಾರಿ ಮುಂದುವರಿಸಿದರು.ದಿಡ್ಡಳ್ಳಿ ಗಿರಿಜನ ಹಾಡಿಯ ಸುಮಾರು 40 ನಿವಾಸಿಗಳಿಗೆ ಈ ಹಿಂದೆ ಸರ್ಕಾರ ವಾಸಿಸಲು ಜಾಗವನ್ನು ನಿಗದಿ ಮಾಡಿ ಹಂಚಿತ್ತು.
ಅರಣ್ಯದ ಒಳಭಾಗದಲ್ಲಿ ಕಾಡಾನೆ ಹಾವಳಿಯಿಂದಾಗಿ ಜೀವನ ನಿರ್ವಹಣೆ ಅಸಹನೀಯವಾಗಿದ್ದರಿಂದ, ಮಕ್ಕಳಿಗೆ ವಿದ್ಯಾಭ್ಯಾಸಕ್ಕೂ ತೊಂದರೆ ಆಗುತ್ತಿದೆ ಎಂದು ದೂರಿ ಅರಣ್ಯವಾಸಿಗಳು ಇತ್ತೀಚಿನ ವರ್ಷಗಳಲ್ಲಿ ಬೇರೆಬೇರೆ ಜಾಗಗಳಲ್ಲಿ ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡಿದ್ದರು.
ಆಗ ಅರಣ್ಯ ಇಲಾಖೆ ಅಧಿಕಾರಿಗಳು ಹಾಡಿಯ ಕೆಲವರ ಮೇಲೆ ಪೊನ್ನಂಪೇಟೆ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು.ನಿರ್ಬಂಧಿತ ಪ್ರದೇಶದಲ್ಲಿ ಮನೆ ನಿರ್ಮಿಸದಂತೆ ಸೂಚಿಸಿರುವುದಕ್ಕೆ ಹಾಡಿ ನಿವಾಸಿಗಳು ಪ್ರತಿರೋಧ ಒಡ್ಡುತ್ತ್ದ್ದಿದ್ದಾರೆ. ಆದ್ದರಿಂದ ಮೇಲಧಿಕಾರಿಗಳಿಗೆ ದೂರು ನೀಡಿ ವಾಪಸಾಗಿದ್ದೇವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶ್ರೀನಿವಾಸ್ ತಿಳಿಸಿದರು.
ತಲೆತಲಾಂತರದಿಂದ ನಾವು ಇಲ್ಲಿ ವಾಸ ಮಾಡುತ್ತಿದ್ದೇವೆ. ಸರ್ಕಾರ ಇಲ್ಲಿ ವಾಸಿಸುತ್ತಿರುವ ಕೆಲವರಿಗೆ ಹಕ್ಕು ಪತ್ರ ನೀಡಿದೆ. ನಾವು ಕಟ್ಟಿರುವ ಮನೆಯನ್ನು ನವೀಕರಣಗೊಳಿಸುತ್ತಿದ್ದೇವೆ. ಆದರೂ ಅರಣ್ಯ ಇಲಾಖೆ ಕಿರುಕುಳ ನೀಡುತ್ತಿದೆ ಎಂದು ಹಾಡಿಯ ನಿವಾಸಿಗಳಾದ ಚಂದ್ರ, ಮುತ್ತಮ್ಮ, ಕಾಳ ಹಾಗೂ ಅಪ್ಪಾಜಿ ದೂರಿದರು.