ಪುತ್ತೂರು: `ಪಶ್ಚಿಮ ಘಟ್ಟಗಳಿಗೆ ಹಸಿರು ಕವಚ ತೊಡಿಸುವ ಯೋಜನೆ ಜಾರಿಯಲ್ಲಿದ್ದು, ಹೊರ ರಾಜ್ಯದವರಿಂದ ಆಗುತ್ತಿರುವ ನಾಡಿನ ಅರಣ್ಯ ಸಂಪತ್ತು ನಾಶ ತಡೆಯುವ ಕೆಲಸ ಸರ್ಕಾರದ್ದು ಮಾತ್ರವಲ್ಲ, ಈ ಜವಾಬ್ದಾರಿ ಎಲ್ಲರ ಮೇಲಿದೆ~ ಎಂದು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.
ರಾಜ್ಯ ಸರ್ಕಾರದ ಪಶ್ಚಿಮ ಘಟ್ಟ ಕಾರ್ಯಪಡೆ ಮತ್ತು ಮಂಗಳೂರು ವಿಭಾಗ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಬೈಪಾಸ್ನಲ್ಲಿರುವ ಗೌಡ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ ವೃಕ್ಷಾರೋಪಣಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
`ಪಶ್ಚಿಮ ಘಟ್ಟಗಳು ದಕ್ಷಿಣ ಭಾರತದ ಅಕ್ಷಯ ಪಾತ್ರೆಯಾಗಿದ್ದು, ಅಪರೂಪದ ಪಕ್ಷಿ ಸಂಕುಲ, ಔಷಧೀಯ ಸಸ್ಯ ಸಂಪತ್ತು, ವಿಭಿನ್ನ ರೀತಿಯ ವೃಕ್ಷ ಸಮೂಹಗಳ ಆಗರವಾಗಿದೆ~ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕಿ ಮಲ್ಲಿಕಾ ಪ್ರಸಾದ್ ಮಾತನಾಡಿ ಶಾಸಕರ ಅನುದಾನದಿಂದ ರೂ.2 ಲಕ್ಷ ಮೊತ್ತವನ್ನು ಅರಣ್ಯ ಸಂರಕ್ಷಣೆಗೆ ನೀಡುವುದಾಗಿ ಭರವಸೆ ನೀಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಂಭು ಭಟ್, ಪುರಸಭಾ ಅಧ್ಯಕ್ಷೆ ಕಮಲಾ ಆನಂದ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸಾವಿತ್ರಿ ಶಿವರಾಂ. ಪುತ್ತೂರು ಉಪ ವಿಭಾಗಾಧಿಕಾರಿ ಸುಂದರ ಭಟ್, ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಶಾಂತಪ್ಪ ಮುಖ್ಯ ಅತಿಥಿಗಳಾಗಿದ್ದರು.
ಮಂಗಳೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಓ.ಪಾಲಯ್ಯ, ಪುತ್ತೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಬ್ಬಾಸ್ ಎ.ಎಸ್., ಪುತ್ತೂರು ವಲಯ ಅರಣ್ಯಾಧಿಕಾರಿ ಎನ್.ಸುಬ್ರಹ್ಮಣ್ಯ ರಾವ್ ಮತ್ತಿತರರು ಇದ್ದರು.