ಬೆಂಗಳೂರು: `ಗಣಿಗಾರಿಕೆ ಹಾಗೂ ಒತ್ತುವರಿಯಿಂದ ಬರಿದಾಗುತ್ತಿರುವ ಅರಣ್ಯವನ್ನು ಸಂರಕ್ಷಿಸುವ ಜವಾಬ್ದಾರಿ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲಿದೆ~ ಎಂದು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ `ಕರ್ನಾಟಕ ಇ-ಗ್ರೀನ್ ವಾಚ್~ ಹಾಗೂ `ಭುವನ್ ಕರ್ನಾಟಕ~ ವೆಬ್ಸೈಟ್ಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
`ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಯಿಂದ ಜೀವ ವೈವಿಧ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಅರಣ್ಯ ಒತ್ತುವರಿಯಿಂದ ಅರಣ್ಯ ಜಮೀನು ದಿನೇ ದಿನೇ ಕಡಿಮೆಯಾಗುತ್ತಿದೆ. ಇದು ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಅರಣ್ಯ ಪ್ರದೇಶವೇ ನಶಿಸಿ ಹೋಗಲಿದೆ~ ಎಂದರು.
`ಅರಣ್ಯ ಇಲಾಖೆಗೆ ಇತರೆ ಇಲಾಖೆಗಳೊಂದಿಗೆ ತಿಕ್ಕಾಟ ಇದ್ದೇ ಇರುತ್ತದೆ. ಇದನ್ನು ತಪ್ಪಿಸಲು ಇಲಾಖೆಗಳ ನಡುವೆ ಸಹಭಾಗಿತ್ವ ಅಗತ್ಯ. ಹೀಗಾಗಿ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳಿದ್ದರೂ ಅವರು ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇಲಾಖೆಗಳ ನಡುವಿನ ತಿಕ್ಕಾಟ ಕಡಿಮೆಗೊಳಿಸುವ ನಿಟ್ಟಿನಲ್ಲಿ ವೆಬ್ಸೈಟ್ಗಳು ಕಾರ್ಯ ನಿರ್ವಹಿಸಬೇಕು~ ಎಂದು ಅವರು ಹೇಳಿದರು.
ಕೇಂದ್ರ ಅರಣ್ಯ ಇಲಾಖೆಯ ಪ್ರಧಾನ ನಿರ್ದೇಶಕ ಡಾ.ಪಿ.ಜಿ.ದಿಲೀಪ್ ಕುಮಾರ್ ಮಾತನಾಡಿ, `ಅರಣ್ಯ ಸಂರಕ್ಷಣೆಯಲ್ಲಿ ಇಲಾಖೆಯ ತಳಮಟ್ಟದ ಸಿಬ್ಬಂದಿಯ ಪಾತ್ರ ಮಹತ್ವದ್ದು. ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಇಲಾಖೆ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆಯ ತಳಮಟ್ಟದ ಸಿಬ್ಬಂದಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ~ ಎಂದರು.
ರಾಜ್ಯ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆರ್.ಶ್ರೀಧರನ್ ಮಾತನಾಡಿ, `ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ನಕಾಶೆಗಳಲ್ಲಿ ಅನೇಕ ಗೊಂದಲಗಳಿವೆ. ಈ ಗೊಂದಲಗಳ ನಿವಾರಣೆಗೆ ವೆಬ್ಸೈಟ್ ಸಹಕಾರಿಯಾಗಬೇಕು~ ಎಂದು ಆಶಿಸಿದರು.