ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ ಅವರು ಇತ್ತೀಚೆಗೆ ಕನಕಪುರದ ಅರಣ್ಯ ಪ್ರದೇಶದಲ್ಲಿ ಓಡಾಡಿ ಅಲ್ಲಿನ ಕಲ್ಲು ಗಣಿಗಾರಿಕೆ ಅಕ್ರಮಗಳನ್ನು ನೋಡಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳುವ ಮಾತುಗಳನ್ನು ಆಡಿದ್ದಾರೆ. ಅವರು ಈಗ ಈ ವಿಷಯ ಪ್ರಸ್ತಾಪ ಮಾಡುತ್ತಿರುವುದಕ್ಕೆ ಏನು ಕಾರಣ ಎನ್ನುವುದು ಗೊತ್ತಾಗುತ್ತಿಲ್ಲ.
ಎರಡು ದಶಕಗಳಿಂದ ತಾಲ್ಲೂಕಿನ ಸಂತೆಕೋಡಿಹಳ್ಳಿ (ಹೋಬಳಿ), ಉಯ್ಯಂಬಳ್ಳಿ ಹೋಬಳಿ ಮತ್ತು ಕಸಬಾ ಹೋಬಳಿಗಳಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಅದು ಎಲ್ಲರಿಗೂ ಗೊತ್ತಿದೆ. ಅಷ್ಟೇ ಅಲ್ಲ ಗಣಿಗಳ ಸುತ್ತಲಿನ ರೈತರ ಬೇಸಾಯದ ಭೂಮಿಯಲ್ಲಿ ಗಣಿ `ತ್ಯಾಜ್ಯ~ ಸುರಿಯುತ್ತಿದ್ದಾರೆ.
ಗುತ್ತಿಗೆದಾರರು ನಿಗದಿಪಡಿಸಿದ ಬೆಲೆಗೆ ರೈತರು ತಮ್ಮ ಭೂಮಿಗಳನ್ನು ತ್ಯಾಜ್ಯ ಸುರಿಯಲು ನೀಡುವಂತೆ ಒತ್ತಾಯದ ದಬ್ಬಾಳಿಕೆ ಮಾಡುತ್ತಾರೆ. ಅಕ್ರಮ ಗಣಿಗಾರಿಕೆಯಲ್ಲಿ ಬಳ್ಳಾರಿಗೆ ಇರುವಷ್ಟೇ ಕೆಟ್ಟ ಹೆಸರು ಕನಕಪುರಕ್ಕೆ ಇದೆ.
ಗಣಿ ಅಕ್ರಮಗಳಲ್ಲಿ ತೊಡಗಿರುವವರ ವಿರುದ್ಧ ಧ್ವನಿ ಎತ್ತುವ ಶಕ್ತಿ ಯಾರಿಗೂ ಇಲ್ಲ. ಜೆಡಿಎಸ್ ಮತ್ತು ಬಿ.ಜೆ.ಪಿ. ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರೂ ಅಕ್ರಮಗಳ ವಿರುದ್ಧ ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಅರಣ್ಯ ಸಚಿವರು ಅಕ್ರಮಗಳನ್ನು ತಡೆಯುವುದಾಗಿ ಹೇಳುತ್ತಿದ್ದಾರೆ. ಅವರು ರಾಜಕೀಯ ಕಾರಣಕ್ಕೆ ಹೀಗೆ ಹೇಳುತ್ತಿದ್ದಾರೋ ಅಥವಾ ತಾಲ್ಲೂಕಿನ ಸಂಪನ್ಮೂಲಗಳನ್ನು ಉಳಿಸುವ ನಿಜವಾದ ಕಾಳಜಿಯಿಂದ ಹೇಳಿದ್ದಾರೋ?