ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸರ ಆಡಳಿತ ನೆನಪಿಸಿದ ಕಾರ್ಯಕ್ರಮ

Last Updated 9 ಫೆಬ್ರುವರಿ 2012, 8:15 IST
ಅಕ್ಷರ ಗಾತ್ರ

ಸುರಪುರ: (ಶಹೀದ್ ತಜ್ದೀಕ್ ಹುಸೇನ್ ವೇದಿಕೆ) ಅದೊಂದು ಅದ್ಧೂರಿ ಕಾರ್ಯಕ್ರಮ. ಆಗಮಿಸಿದ್ದ ಎಲ್ಲಾ ಗಣ್ಯರು ರಾಜ ಪೋಷಾಕಿನಲ್ಲಿದ್ದರು. ಅವರ ಮುಖದಲ್ಲಿ ರಾಜ ಗಾಂಭೀರ್ಯ. ಒಬ್ಬರಲ್ಲ, ಇಬ್ಬರಲ್ಲ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ದಕ್ಷಿಣ ಭಾರತದ ರಾಜ ವಂಶಜರು ಮತ್ತು ನೆರವು ನೀಡಿದ ಮನೆತನದ 12 ಜನ ಗಣ್ಯರು ಅಲ್ಲಿದ್ದರು.

ಭೀಮರಾಯನಗುಡಿಯ ಸುರಪುರ ಇತಿಹಾಸ ಸಂಶೋಧನಾ ಕೇಂದ್ರ, ನಾಲ್ವಡಿ ರಾಜಾ ವೆಂಕಟಪ್ಪನಾಯಕ್ ಯುವ ಸೇನೆ ಮತ್ತು ರುಕ್ಮಾಪುರ ಗ್ರಾಮ ಸುಧಾರಣಾ ಸಮಿತಿ ಇಲ್ಲಿನ ಅರಮನೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಜಯೋತ್ಸವ ಕಾರ್ಯಕ್ರಮದ ದೃಶ್ಯಾವಳಿಗಳಿವು.

ಸಹಜವಾಗಿ ಅರಮನೆ ಮೈದಾನ ಕಿಕ್ಕಿರಿದು ತುಂಬಿತ್ತು. ಇತಿಹಾಸದ ಅಭಿಮಾನಿಗಳು ಸುತ್ತಮುತ್ತಲಿನ ಮತ್ತು ದೂರದ ಊರುಗಳಿಂದ ಆಗಮಿಸಿದ್ದರು. ಎಲ್ಲರಿಗೂ ರಾಜ ವಂಶಜರನ್ನು ನೋಡುವ ಆಸೆ. ಕಾರ್ಯಕ್ರಮದ ನಂತರ ಬಹುತೇಕ ಜನ ಆಗಮಿಸಿದ್ದ ಅರಸು ವಂಶಜರನ್ನು ಭೇಟಿಯಾಗುವುದು ಇದಕ್ಕೆ ಪುಷ್ಠಿ ನೀಡಿತ್ತು.

ಸಹಜವಾಗಿಯೇ ಇದು ಇಲ್ಲಿನ ಸಂಸ್ಥಾನಿಕ ರಾಜಾ ವೆಂಕಟಪ್ಪನಾಯಕ್ ಅವರಿಗೆ ಹುಮ್ಮಸ್ಸು ತಂದಿತ್ತು. ಅಧ್ಯಕ್ಷತೆ ವಹಿಸಿದ್ದ ಅವರು, ವಿಜಯೋತ್ಸವದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ದಕ್ಷಿಣ ಭಾರತ ಸಂಸ್ಥಾನದ ಅರಸರು ಭಾಗವಹಿಸಿರುವುದು ನಮಗೆ ಸಂತಸ ತಂದಿದೆ. ಕಾರ್ಯಕ್ರಮದ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದ ಅರಸರ ಇತಿಹಾಸದ ಬಗ್ಗೆ ಮುಂದಿನ ಪೀಳಿಗೆಗೆ ಕಲ್ಪನೆ ನೀಡಲು ಯತ್ನಿಸಲಾಗುವುದು ಎಂದರು.

ಮಹಾರಾಷ್ಟ್ರ ತಾಸಗಾಂವ ಸಂಸ್ಥಾನದ ರಾಜಾ ಶ್ರೀಮಂತ ರಾಜರಾಜೇಂದ್ರ ಪರಶುರಾಮ ಪಟವರ್ಧನ್, ಜಮಖಂಡಿ ಸಂಸ್ಥಾನದ ರಾಜಾ ಶ್ರೀಮಂತ ಪ್ರಣಯ ಪರಶುರಾಮ ಪಟವರ್ಧನ್, ಮಳಖೇಡ ಸಂಸ್ಥಾನದ ನವಾಬ್ ಮಿರ್ಜಾ ಜಾಫರ್ ಅಲಿ ಬೇಗ್, ಆಸ್ಟ್ರೇಲಿಯಾ ಪರ್ತ್ ವಿ.ವಿ.ಯ ಆಡಳಿತಾಧಿಕಾರಿ ಸುಪ್ರತೀಕ್ ಮುಖರ್ಜಿ, ನೀಲಕಂಠರಾವ ದೇಶಮುಖ, ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.

ಜತ್ತ ಸಂಸ್ಥಾನದ ರಾಣಿ ರಾಜಕುಮಾರಿ, ಹುತಾತ್ಮ ಮುಂಡರ್ಗಿ ಭೀಮರಾಯ ವಂಶಜ ವೆಂಕಟರಾವ ನಾಡಗೌಡ, ಹುತಾತ್ಮ ಬಸಲಿಂಗಪ್ಪ ಜಂಬಗಿ ವಂಶಜ ರವಿಶಂಕರ್ ದೇಶಮುಖ, ಹುತಾತ್ಮ ಗೌಡಪ್ಪಗೌಡ ಗಂವ್ಹಾರ್ ವಂಶಜ ವಿಜಯಕುಮಾರ್, ಮುಧೋಳ ಬೇಡರ ಪಡೆಯ ಸೇನಾಪತಿ ವಂಶಜ ಈರಪ್ಪ ಜಡಗಾ ಹಲಗಲಿ, ಗರುಡಾದ್ರಿ ಚಿತ್ರಕಲಾವಿದ ವಿಜಯ ಹಾಗರಗುಂಡಗಿ, ಯುವರಾಜಾ ಲಕ್ಷ್ಮೀನಾರಾಯಣ ನಾಯಕ್, ವಾಸುದೇವ ನಾಯಕ್, ನಿವೃತ್ತ ಎಸ್. ಪಿ. ಸಿ. ಎನ್. ಭಂಡಾರೆ ವೇದಿಕೆಯಲ್ಲಿದ್ದರು. ಮೈಲಾರೆಪ್ಪ ಸಗರ್ ಸುರಪುರ ರಾಜರ ಇತಿಹಾಸ ಸಾರುವ ಖ್ಯಾತ ದುಮ ದುಮ್ಮೆ ಪದ ಹಾಡಿದರು.

ಇತಿಹಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಭಾಸ್ಕರರಾವ್ ಮುಡಬೂಳ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣ ಸುಬೇದಾರ್ ನಿರ್ಣಯ ಮಂಡಿಸಿದರು. ಉಪನ್ಯಾಸಕರಾದ ಸುರೇಶ ಮಾಮಡಿ ಸ್ವಾಗತಿಸಿದರು. ಅಬ್ದುಲ್ ರಜಾಕ್ ನಿರೂಪಿಸಿದರು. ವೀರಭದ್ರ ಕಿರದಳ್ಳಿ ವಂದಿಸಿದರು.

ನಿವೃತ್ತ ಎಸ್. ಪಿ. ಸಿ. ಎನ್. ಭಂಡಾರೆ ಅವರ ರುಕ್ಮಾಪುರ ತೋಟದಲ್ಲಿ ಗರುಡಾದ್ರಿ ಚಿತ್ರಕಲೆಯ ಪ್ರದರ್ಶನ ಏರ್ಪಡಿಸಲಾಗಿತ್ತು. ಗಣ್ಯರಿಗೆ ತೋಟದಲ್ಲಿ ಮತ್ತು ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸನ್ಮಾನಿಸಲಾಯಿತು. ಶರಣಬಸಪ್ಪ ನಿಷ್ಠಿ, ಡಾ. ಮಲ್ಲಿಕಾರ್ಜುನ್ ನಿಷ್ಠಿ, ದೊಡ್ಡಪ್ಪ ನಿಷ್ಠಿ ಇದ್ದರು.

ಸಮಾರಂಭದಲ್ಲಿ ತೆಗೆದುಕೊಂಡ ನಿರ್ಣಯಗಳು
* ಸುರಪುರದಲ್ಲಿ ಸೈನಿಕ ಶಾಲೆ ಸ್ಥಾಪಿಸಬೇಕು.
* ಸುರಪುರ ಉತ್ಸವ ಆಚರಿಸಬೇಕು.
* ಸರ್ಕಾರವೇ ಪ್ರತಿವರ್ಷ ಫೆ. 8 ರಂದು ವಿಜಯೋತ್ಸವ ಆಚರಿಸಬೇಕು.
* ಗುಲ್ಬರ್ಗ, ಹಂಪಿ, ಬಳ್ಳಾರಿ ವಿ.ವಿ. ಗಳಲ್ಲಿ ಸರ್ಕಾರ ಸುರಪುರ ಸಂಸ್ಥಾನದ ಇತಿಹಾಸ ಅಧ್ಯಯನ ಪೀಠ ಆರಂಭಿಸಬೇಕು.
* ಸುರಪುರವನ್ನು ಪ್ರವಾಸಿತಾಣವಾಗಿ ಘೋಷಿಸಿ ಅಭಿವೃದ್ಧಿ ಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT