ರಾಮನಾಥಪುರ: ಸಮೀಪದ ಅರಸಿಕಟ್ಟೆಗೆ ಬರುವವರು ಒಮ್ಮೆ ಇಲ್ಲಿನ ದೇವಸ್ಥಾನಕ್ಕೆ ಭೇಟಿ ಕೊಟ್ಟು ಹೋಗುತ್ತಾರೆ. ಆದರೆ ಈ ಗ್ರಾಮದ ಸ್ಥಿತಿಯನ್ನು ನೋಡಿದರೆ ಭಕ್ತರೂ ಅಸಹ್ಯ ಪಡುವಂತಾಗಿದೆ.
ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯಿಂದ 5 ಕಿ.ಮೀ. ದೂರದ ಅರಸಿಕಟ್ಟೆ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಇಂದಿಗೂ ಅನೇಕ ಕುಟುಂಬಗಳು ಗುಡಿಸಲಿನಲ್ಲಿ ವಾಸಿಸುತ್ತಿವೆ. ಗ್ರಾಮದಲ್ಲಿನ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುತ್ತಿವೆ. ಕುಡಿಯುವ ನೀರು ಸರಬರಾಜಿಗೆ ಟ್ಯಾಂಕ್ ನಿರ್ಮಿಸಿದ್ದಾರೆ. ಆದರೆ, ಇನ್ನೂ ನಲ್ಲಿ ಅಳವಡಿಸಿಲ್ಲ. ಟ್ಯಾಂಕ್ ಸುತ್ತ ಕಸದ ರಾಶಿ ಬಿದ್ದಿದೆ.
ಇಲ್ಲಿನ ಸಮುದಾಯ ಭವನದ ಸುತ್ತಲೂ ಕಸದ ರಾಶಿ, ಮದ್ಯದ ಖಾಲಿ ಬಾಟಲುಗಳ ರಾಶಿ ಇದೆ. ಸುತ್ತ ಗಿಡಗಂಟಿಗಳು ಬೆಳೆದು ಒಬ್ಬಂಟಿಯಾಗಿ ಜನರು ಓಡಾಡಲು ಹೆದರುವ ಸ್ಥಿತಿ ಇದೆ. ಮಾಂಸದ ಅಂಗಡಿಗಳವರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದು ಊರಿನ ಅಂದ ಕೆಡಿಸಲು ತಮ್ಮ ಕಾಣಿಕೆಯನ್ನೂ ನೀಡಿದ್ದಾರೆ.
ಊರಿನ ಜನರು ಬಸ್ ಹಿಡಿಯಬೇಕಾದರೆ ಸುಮಾರು ಒಂದೂವರೆ ಕಿ.ಮೀ. ನಡೆದುಕೊಂಡು ಬರಬೇಕು. ಇಲ್ಲಿನ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರೂ ಸೌಲಭ್ಯಗಳಿಲ್ಲ. ಭಕ್ತರು ಇಲ್ಲಿನ ಅಸಮರ್ಪಕ ಸೌಕರ್ಯ ನೋಡಿ ದೇಗುಲದ ಆಡಳಿತ ಮಂಡಳಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹೋಗುತ್ತಾರೆ.
ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿದ್ದರೂ ಇಲ್ಲಿಗೆ ಬಸ್ ಸೌಲಭ್ಯ ಇಲ್ಲ. ರಸ್ತೆ ವ್ಯವಸ್ಥೆಯೇ ಸರಿಯಾಗಿಲ್ಲ. ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ದೇಗುಲ ತಲುಪುವುದೇ ಪ್ರಯಾಸದ ಸಂಗತಿ. ಕಷ್ಟಪಟ್ಟು ಬಂದರೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇಲ್ಲ.
ದೇವಾಲಯ ಕೆರೆಯ ಏರಿ ಮೇಲೆ ಇದೆ. ಎಡ ಭಾಗದಲ್ಲಿ 50 ಅಡಿ ಆಳದಲ್ಲಿ ಅಡಕೆ ತೋಟ, ಬಲ ಭಾಗದಲ್ಲಿ ಹಳೇಯ ಕೆರೆ ಇದೆ. ಆದರೂ ಎರಡೂ ಕಡೆ ತಡೆಗೂಡೆ ಇಲ್ಲ. ತಡೆಗೋಡೆ ನಿರ್ಮಿಸಬೇಕು ಎಂಬುದು ಭಕ್ತರ ಆಗ್ರಹ.