ಅರಸೀಕೆರೆ: ಅರಣ್ಯದಿಂದ ಹೊರಬಂದ ಸಾರಂಗವೊಂದು ಪಟ್ಟಣದ ಚಿತ್ರಮಂದಿರದ ಆವರಣದಲ್ಲಿ ಕೆಲವು ಕಾಲ ಸಂಚರಿಸಿ ಜನರಿಗೆ ಅಚ್ಚರಿ ಮೂಡಿಸಿದ ಘಟನೆ ಬುಧವಾರ ನಡೆಯಿತು.
ಅರಣ್ಯದಿಂದ ತಪ್ಪಿಸಿಕೊಂಡು ಬಂದ ಸಾರಂಗ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸಾಧನ ಚಿತ್ರಮಂದಿರದ ಆವರಣಕ್ಕೆ ಜಿಗಿಯಿತು. ಚಿತ್ರಮಂದಿರದ ಹೊರಗಡೆ ಇದ್ದ ಜನ ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಸಾರಂಗ ಕಂಡು ಆಶ್ಚರ್ಯ ವ್ಯಕ್ತ ಪಡಿಸಿದರು. ಕೆಲವೇ ನಿಮಿಷಗಳಲ್ಲಿ ಸಾರಂಗ ಕಾಣಲು ಜನರ ದೊಡ್ಡ ಗುಂಪು ಜಮಾಯಿಸಿತು. ತಕ್ಷಣ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿತು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸಾರಂಗ ಹಿಡಿಯಲು ಹರಸಾಹಸ ಪಟ್ಟರು. ಹಲವು ತಂತ್ರ ಬಳಸಿ ಸಾರಂಗವನ್ನು ಸೆರೆ ಹಿಡಿಯಲು ಯತ್ನಿಸಿದರು. ಜನರ ಕೂಗು ಕೇಳಿದ ಸಾರಂಗ ಭಯಗೊಂಡು ಚಿತ್ರಮಂದಿರದ ಕಾಂಪೌಂಡ್ ಹಾರಿ ರಸ್ತೆಗೆ ನೆಗೆಯಿತು. ರಸ್ತೆಯಲ್ಲಿ ಓಡುವಾಗ ಬೈಕ್ವೊಂದು ಅಡ್ಡ ಬಂದಿತು. ಸಾರಂಗ ನೋಡಿ ಗಾಬರಿಗೊಂಡ ಬೈಕ್ ಸವಾರರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು. ಸವಾರ ಮೋಹನ್ ಹಾಗೂ ಹಿಂಬದಿ ಸವಾರ ಚೇತನ್ ಸಾರಂಗದ ಕೊಂಬು ತಗುಲಿ ಗಾಯಗೊಂಡರು.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.