ಕೋಲಾರ: ನಗರದ ಹೊರವಲಯದ ಟಮಕದಲ್ಲಿರುವ ದೇವರಾಜ ಅರಸ್ ವೈದ್ಯಕೀಯ ಮಹಾವಿದ್ಯಾಲಯದ 20ನೇ ಘಟಿಕೋತ್ಸವ ಫೆ.14ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ 18 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಗುವುದು ಎಂದು ಪ್ರಾಂಶುಪಾಲ ಡಾ.ಎಂ.ಬಿ.ಸಾಣಿಕೊಪ್ಪ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮಣಿಪಾಲ್ ವಿಶ್ವವಿದ್ಯಾನಿಲಯದ ಸಮಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ ಅವರು ಘಟಿಕೋತ್ಸವ ಭಾಷಣ ಮಾಡುತ್ತಾರೆ. ದೇವರಾಜ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನೆ ಸಂಸ್ಥೆಯ ಅಧ್ಯಕ್ಷ ಆರ್.ಎಲ್.ಜಾಲಪ್ಪ ಅಧ್ಯಕ್ಷತೆ ವಹಿಸಿ, ಪದಕ ಮತ್ತು ಪ್ರಮಾಣಪತ್ರಗಳನ್ನು ವಿತರಿಸುತ್ತಾರೆ. ಸಂಸ್ಥೆಯ ಕುಲಪತಿ ಡಾ.ಎಸ್.ಚಂದ್ರಶೇಖರ ಶೆಟ್ಟಿ ‘ಸಂಕೀರ್ಣ-2011’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುತ್ತಾರೆ ಎಂದು ತಿಳಿಸಿದರು.
ಶಾಸ್ತ್ರ ವಿಭಾಗದಲ್ಲಿಮಕ್ಕಳ ಚಿನ್ನದ ಪದಕವನ್ನು ಪಡೆದಿರುವ ಡಾ. ಅನನ್ಯ ಲಕ್ಷ್ಮೀ 2010-11 ನೇ ಸಾಲಿನ ಅತ್ಯುತ್ತಮ ಪದವಿ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಅವರು ನಿಪುಣ ವಿದ್ಯಾರ್ಥಿನಿ ಎಂದು ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಡಾ.ಪ್ರಜ್ವಲ್ ಶೆಟ್ಟಿ ನಿಪುಣ ವಿದ್ಯಾರ್ಥಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ ಎಂದರು.
ಅತ್ಯುತ್ತಮ ಮಹಿಳಾ ಕ್ರೀಡಾಪಟು ಡಾ. ಮಹೇಶ್ವರಿ.ಎಂ ಹಾಗೂ ಅತ್ಯುತ್ತಮ ಪುರುಷ ಕ್ರೀಡಾಪಟು ಡಾ. ಕಿರಣ್.ಡಿ. ನಾಗರಾಜರಾವ್.ಆರ್.ಜಗದಾಳೆ ಸ್ಮರಣಾರ್ಥ ಚಿನ್ನದ ಪದಕ ಗಳಿಸಿದ್ದಾರೆ. ಡಾ. ಶ್ರೀನಿವಾಸ.ಎಸ್ ವೈದ್ಯ ಶಾಸ್ತ್ರ ವಿಭಾಗದಲ್ಲಿ ಅತಿಹೆಚ್ಚು ಅಂಕಗಳಿಸಿ ಡಾ.ಎ.ಆರ್.ಪಾಟೀಲ್ ಸ್ಮರಣಾರ್ಥ ಚಿನ್ನದ ಪದಕ ಗಳಿಸಿದ್ದಾರೆ.
ಚಿನ್ನದ ಪದಕ ವಿಜೇತರುಹಂಸ.ಎಂ. - ಅಂಗರಚನಾ ಶಾಸ್ತ್ರ, ಅರ್ಚನಾ.ಎಲ್ - ಅಂಗಕ್ರಿಯಾ ಶಾಸ್ತ್ರ, ಅರ್ಜುನ್.ಬಿ.ಟಿ - ಜೀವರಸಾಯನ ಶಾಸ್ತ್ರ, ಲಕ್ಷ್ಮೀ.ಆರ್.ಆರ್- ರೋಗ ಲಕ್ಷಣ ಶಾಸ್ತ್ರ, ದಾಕ್ಷಾಯಿಣಿ. ಸಿ- ಸೂಕ್ಷ್ಮ ಜೀವಶಾಸ್ತ್ರ, ನೀರಜ್ ಸರಫ್- ಔಷಧ ಶಾಸ್ತ್ರ, ಪ್ರಿಯಾ ಟಿ.ರಾಜನ್- ನ್ಯಾಯವೈದ್ಯ ಶಾಸ್ತ್ರ, ಪದ್ಮಾವತಿ..ಎಂ- ಸಮುದಾಯ ವೈದ್ಯ ಶಾಸ್ತ್ರ, ಶಾಜಿಯಾ ಅಶ್ರೀನಾ- ನೇತ್ರ ಶಾಸ್ತ್ರ, ಬಿಂದು.ಆರ್ - ಕಿವಿ ಮೂಗು ಗಂಟಲು ರೋಗ ಶಾಸ್ತ್ರ, ಭಾವನ.ಎನ್ - ವೈದ್ಯ ಶಾಸ್ತ್ರ, ಪ್ರತಿಮಾ.ಎ- ಶಸ್ತ್ರಚಿಕಿತ್ಸಾಶಾಸ್ತ್ರ, ಅರುಣ್ ಕುಮಾರ್.ಎಸ್.ಎಲ್- ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರ.ಮನವಿ: ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ಫೆ.14ರಂದು ಜಿಲ್ಲೆಯಲ್ಲಿ ಬಂದ್ ಆಚರಣೆ ಇರುವುದರಿಂದ, ಘಟಿಕೋತ್ಸವಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಕೋರಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಉಚಿತ ಚಿಕಿತ್ಸಾ ಯೋಜನೆ ಅಡಿಯಲ್ಲಿ ನಗರ ಮತ್ತು ಹೊನ್ನೇನಹಳ್ಳಿಯ ಪಂಚಾಯಿತಿ ವ್ಯಾಪ್ತಿಯ ಎಲ್ಲ ನಿವಾಸಿಗಳಿಗೆ ಇದುವರೆಗೆ 31 ಸಾವಿರ ಆರೋಗ್ಯ ರಕ್ಷಾ ಕಾರ್ಡ್ಗಳನ್ನು ವಿತರಿಸಲಾಗಿದೆ. ಕಾರ್ಡುಳ್ಳ ಬಿಪಿಎಲ್ ಕುಟುಂಬದವರಿಗೆ ಶೇ. 50 ರಿಯಾಯಿತಿ, ಇತರರಿಗೆ ಶೇ 25ರಷ್ಟು ರಿಯಾಯಿತಿಯನ್ನು ಚಿಕಿತ್ಸಾ ವೆಚ್ಚದಲ್ಲಿ ನೀಡಲಾಗುವುದು ಎಂದರು.
ಸ್ಪರ್ಶ್ ಆಸ್ಪತ್ರೆಯೊಡನೆ ಮಾಡಿಕೊಂಡಿರುವ ಒಪ್ಪಂದದಂತೆ, ಮುಂದಿನ 2 ತಿಂಗಳೊಳಗೆ ಮೂಳೆ ಚಿಕಿತ್ಸೆ ಘಟಕವು ಆಸ್ಪತ್ರೆಯಲ್ಲಿ ಆರಂಭವಾಗಲಿದೆ. ಆಸ್ಪತ್ರೆಯಲ್ಲಿರುವ ನಾರಾಯಣ ಹೃದಯಾಲಯದ ಘಟಕದಲ್ಲಿ ಕಳೆದ ಮಾರ್ಚಿಯಿಂದ ಇಲ್ಲಿವರೆಗೆ 7,200 ಹೊರರೋಗಿಗಳು, 1496 ಒಳರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 85 ಮಂದಿಗೆ ಸ್ಟಂಟ್ ಅಳವಡಿಸಲಾಗಿದೆ. 10ಮಂದಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದರು.
ಸಮುದಾಯ ವೈದ್ಯಕೀಯ ವಿಭಾಗದ ಡಾ.ರಂಗನಾಥ್, ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎನ್.ಲಕ್ಷ್ಮಯ್ಯ, ಡಾ.ಎಂ.ಎಸ್. ಪ್ರಸಾದ್, ಡಾ.ಎಂ.ನಾರಾಯಣಸ್ವಾಮಿ, ಡಾ. ಎಂ.ಎಚ್. ಚಂದ್ರಪ್ಪ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.