ಬೆಂಗಳೂರು: ಮಾಜಿ ಆಟಗಾರರಾದ ಜೆ.ಅರುಣ್ ಕುಮಾರ್ ಹಾಗೂ ಮನ್ಸೂರ್ ಅಲಿ ಖಾನ್ ಅವರನ್ನು ಕರ್ನಾಟಕ ರಣಜಿ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ. ಆರ್.ಸುಧಾಕರ್ ರಾವ್ ಅವರು ತಂಡದ ಮ್ಯಾನೇಜರ್ ಆಗಿರುತ್ತಾರೆ.
ಈ ವಿಷಯವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ತಿಳಿಸಿದ್ದಾರೆ. `ಸುದೀರ್ಘ ಸಂದರ್ಶನದ ಬಳಿಕ ಕೋಚ್ಗಳನ್ನು ಆಯ್ಕೆ ಮಾಡಲಾಗಿದೆ. ಆರು ಮಂದಿಯನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಅವರಲ್ಲಿ ಐದು ಮಂದಿ ಆಗಮಿಸಿದ್ದರು~ ಎಂದು ಅವರು ಹೇಳಿದರು.
2011-12ರ ರಣಜಿ ಟೂರ್ನಿ ಋತುವಿನಲ್ಲಿ ಕೆ.ಜಸ್ವಂತ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಸೋಮಶೇಖರ ಶಿರಗುಪ್ಪಿ ಸಹಾಯಕ ಕೋಚ್ ಆಗಿದ್ದರು. 37 ವರ್ಷ ವಯಸ್ಸಿನ ಅರುಣ್ ಕರ್ನಾಟಕ ತಂಡದ ಮಾಜಿ ನಾಯಕ ಕೂಡ. ಆರಂಭಿಕ ಬ್ಯಾಟ್ಸ್ಮನ್ ಆಗಿದ್ದ ಅವರು 109 ಪ್ರಥಮ ದರ್ಜೆ ಪಂದ್ಯಗಳಿಂದ 7208 ರನ್ ಗಳಿಸಿದ್ದರು. 40 ವರ್ಷ ವಯಸ್ಸಿನ ವೇಗಿ ಮನ್ಸೂರ್ 24 ಪ್ರಥಮ ದರ್ಜೆ ಪಂದ್ಯಗಳಿಂದ 78 ವಿಕೆಟ್ ಪಡೆದಿದ್ದಾರೆ.