ನವದೆಹಲಿ: ಜರಾವಾ ಬುಡಕಟ್ಟು ಮಹಿಳೆಯರ ಅರೆನಗ್ನ ಪ್ರಕರಣ ಕುರಿತು ಕಳವಳಗೊಂಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಈ ಕುರಿತು ರ್ಕಾರದಿಂದ ವಿವರಣೆ ಕೇಳಿದ್ದಾರೆ.
ಬುಡಕಟ್ಟು ಸಚಿವ ಕಿಶೋರ್ಚಂದ್ರ ದೇವ್ ಅವರಿಂದ ಸೋನಿಯಾ ಪ್ರಕರಣ ಕುರಿತು ವಿವರಣೆ ಕೇಳಿದ್ದಾರೆ. ಖುದ್ದು ಬುಡಕಟ್ಟು ಸಚಿವರೇ ಈ ವಿಷಯವನ್ನು ಶುಕ್ರವಾರ ಪತ್ರಕರ್ತರಿಗೆ ತಿಳಿಸಿದರು.
ಇದು ಕಾನೂನು- ಸುವ್ಯವಸ್ಥೆಗೆ ಸಂಬಂಧಪಟ್ಟ ವಿಷಯವಾದ್ದರಿಂದ ಗೃಹ ಸಚಿವ ಪಿ. ಚಿದಂಬರಂ ಪ್ರಕರಣದ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಸದ್ಯವೇ ಅಂಡಮಾನ್ಗೂ ಭೇಟಿ ನೀಡಲಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ನಡೆಯುತ್ತಿರುವ ಕಾರ್ಯಾಚರಣೆ ಉಸ್ತುವಾರಿಯನ್ನು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ಹೊತ್ತಿದ್ದಾರೆ ಎಂದರು.
ಈ ಪ್ರಕರಣ ಕುರಿತು ಅಂಡಮಾನ್ ಲೆ. ಗವರ್ನರ್ ಅವರಿಗೆ ಮಾತನಾಡಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ತಿಳಿಸಲಾಗಿದೆ ಎಂದು ಅವರು ಹೇಳಿದರು.
`ಬುಡಕಟ್ಟು ಜನರ ಶೋಷಣೆ ನಡೆಯದಂತೆ ನೋಡಿಕೊಳ್ಳುವುದು ನಮ್ಮ ಹೊಣೆ. ಇಂಥ ಪ್ರಕರಣಗಳನ್ನು ಮಾನವೀಯ ದೃಷ್ಟಿಯಿಂದ ನೋಡಬೇಕಾಗಿದೆ. ದ್ವೀಪದ ಜನ, ಪ್ರಜ್ಞಾವಂತರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜತೆ ಸಮಗ್ರವಾಗಿ ಚರ್ಚಿಸಿದ ಬಳಿಕ ನಿರ್ದಿಷ್ಟ ತೀರ್ಮಾನ ಮಾಡಲಾಗುವುದು~ ಎಂದು ಕಿಶೋರ್ಚಂದ್ರ ದೇವ್ ನುಡಿದರು.