ಅರಸೀಕೆರೆ: ಪಟ್ಟಣದ ಪ್ರಧಾನ ಅಂಚೆ ಕಚೇರಿ ರಸ್ತೆಯಲ್ಲಿ ನೀವು ಬಂದರೆ ಸಾಕು; ಅರೆರೆರೇ ಇದೇನು ಮಳೆ ಇಲ್ಲಿ ಮಾತ್ರ ಹರಿಯುತ್ತಿದೆ ಎಂದು ಅಚ್ಚರಿ ಪಡುತ್ತೀರಿ.
ಹೌದು. ಪಟ್ಟಣದ ಕೆಲವೆಡೆ ನೀರಿನ ಪೈಪುಗಳು ಒಡೆದು, ವಾಲ್ವ್ಗಳಿಂದ ಸೋರಿದ ನೀರು ಇಲ್ಲಿ ರಸ್ತೆಯಲ್ಲೆಲ್ಲಾ ಹರಿದಾಡುತ್ತಿದೆ. ಹನಿ ನೀರಿಗೂ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಅಲೆದಾಡುವ ಸ್ಥಿತಿ ಒಂದೆಡೆಯಾದರೆ, ಕೆಲವು ವಾರ್ಡುಗಳಲ್ಲಿ ಮಾತ್ರ ಅಪಾರ ನೀರು ಹರಿದು ವ್ಯರ್ಥವಾಗುತ್ತಿರುವುದು ಇನ್ನೊಂದೆಡೆ.
ಪಟ್ಟಣದ ಜನತೆಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಪುರಸಭೆ ಹರಸಾಹಸ ಪಡುತ್ತಿದ್ದರೆ, ವಾಟರ್ಮೆನ್ಗಳ ನಿರ್ಲಕ್ಷ್ಯದಿಂದಾಗಿ ನೀರು ಪೋಲಾಗಿ ಚರಂಡಿ ಸೇರುತ್ತಿದೆ. ಪ್ರಧಾನ ಅಂಚೆ ಕಚೇರಿ ರಸ್ತೆಯಲ್ಲಿ ಈ ಸಮಸ್ಯೆ ಗಂಭೀರವಾಗಿದೆ. ಈ ಭಾಗದ ನಿವಾಸಿಗಳಿಗೆ ನೀರು ಸರಬರಾಜು ಮಾಡುವ ಕೊಳವೆಗಳು ಒಡೆದಿವೆ. ಇದರಿಂದ ಈ ರಸ್ತೆ ಸದಾಕಾಲ ನೀರಿನಿಂದ ಆವೃತವಾಗಿರುತ್ತದೆ.
ಪೈಪ್ಲೈನಿಗೆ ಅಳವಡಿಸಿರುವ ವಾಲ್ವ್ಗಳಲ್ಲಿ, ಬಡಾವಣೆಯ ನಲ್ಲಿಗಳಲ್ಲಿ ಬರುವುದಕ್ಕಿಂತ ಹೆಚ್ಚಿನ ನೀರು ಹರಿದು ಚರಂಡಿ ಸೇರುತ್ತಿದೆ. ಪುರಸಭೆ ಮೊದಲು ಇದನ್ನು ಸರಿಪಡಿಸ ಬೇಕಾಗಿದೆ.
ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ 2 ಬೃಹತ್ ನೀರಿನ ಟ್ಯಾಂಕುಗಳಿದ್ದು, ಈ ಟ್ಯಾಂಕುಗಳಿಗೆ ಹೇಮಾವತಿ ನೀರು ಹಾಗೂ ನಾಗತಿಹಳ್ಳಿ ಜಲ ಸಂಗ್ರಹಾರದಲ್ಲಿನ ನೀರು ತುಂಬಿಸಿ ವಿವಿಧ ಬಡಾವಣೆಗಳಿಗೆ ಪೂರೈಸಲಾಗುತ್ತದೆ. ಅನೇಕ ಸಂದರ್ಭದಲ್ಲಿ ಟ್ಯಾಂಕುಗಳಲ್ಲಿ ನೀರು ತುಂಬಿ ಉಕ್ಕಿ ಹರಿಯುತ್ತದೆ.
ಅನೇಕ ಬಡಾವಣೆಗಳಲ್ಲಿ ಜನರು ಹನಿ ನೀರಿಗೂ ಪರಸುತ್ತಿರುವಾಗ ಪುರಸಭೆಯ ಅಧಿಕಾರಿಗಳು, ಜನಪ್ರತಿ ನಿಧಿಗಳು ಇದರತ್ತ ಗಮನ ಹರಿಸಿಲ್ಲ ಎಂಬುದು ನಾಗರಿಕರ ದೂರು.