ಶಿಕಾರಿಪುರ: ‘ಹಣೆಗೆ ಕುಂಕುಮದ ನಾಮ ಹಾಕಿ ಧರ್ಮದ ಆಧಾರದ ಮೇಲೆ ಯುವಕರನ್ನು ದಾರಿ ತಪ್ಪಿಸುವುದೇ ಬಿಜೆಪಿಯ ಉದ್ದೇಶ ವಾಗಿದೆ ಎಂದು’ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಲೇವಡಿ ಮಾಡಿದರು.
ಪಟ್ಟಣದ ಜೈನ ಮಂದಿರದಲ್ಲಿ ಸೋಮವಾರ ತಾಲ್ಲೂಕು ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ನಾಯಕರಿಗೆ ಚುನಾವಣೆ ಬಂದಾಗ ಮಾತ್ರ ರಾಮಮಂದಿರ ನಿರ್ಮಾಣ, ರಾಮಸೇತು ಉಳಿಸುವುದು, ಇಟ್ಟಿಗೆ ಸಂಗ್ರಹಿಸುವುದು ನೆನಪಾಗುತ್ತದೆ ಎಂದು ಟೀಕಿಸಿದರು.
ಚುನಾವಣಾ ಸಮಯದಲ್ಲಿ ಮಾತ್ರ ಹಿಂದೂ ಧರ್ಮದ ರಕ್ಷಣೆ ಸೇರಿದಂತೆ ರಾಷ್ಟ್ರ ನಾಯಕ ಸರದಾರ್ ವಲ್ಲಭ್ ಭಾಯ್ ಪಟೇಲ್ ಪುತ್ಥಳಿ ನಿರ್ಮಿಸುವ ನಿಟ್ಟಿನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಏಕತಾ ಓಟವನ್ನು ದೇಶದಲ್ಲಿ ನಡೆಸುತ್ತಿರುವುದು ಹಾಗೂ ಪ್ರತಿಮೆ ನಿರ್ಮಾಣಕ್ಕೆ ಲೋಹವನ್ನು ಸಂಗ್ರಹಿಸಲು ಹೊರಟಿರುವುದು ಅರ್ಥವಿಲ್ಲದ ಕೆಲಸ. ಇಂಥ ಬಿಜೆಪಿ ಕುತಂತ್ರಕ್ಕೆ ಬಲಿಯಾಗದಂತೆ ಯುವಕರಿಗೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಸರಿಯಾದ ಮಾರ್ಗದರ್ಶನ ನೀಡಬೇಕು ಎಂದರು.
‘ತಾಲ್ಲೂಕಿನ ಶಾಸಕರಾದ ಬಿ.ಎಸ್. ಯಡಿಯೂರಪ್ಪ ನಾನು ರೈತ ಪರ ಹೋರಾಟಗಾರ ಎಂದು ಹೇಳಿಕೊಂಡು ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿದ್ದನ್ನು ಜನತೆ ಸೂಕ್ಷ್ಮವಾಗಿ ಗಮನಿಸಿದ್ದು, ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಉತ್ತರ ನೀಡಲಿದ್ದಾರೆ. ಪ್ರಸ್ತುತ
ಬೆಳಗಾವಿ ಅಧಿವೇಶನದಲ್ಲಿಯೇ ಬಿದಾಯಿ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ ವೇಳೆ ಅವರ ಜತೆ ಯಾರು ಇಲ್ಲದಿರುವುದನ್ನು ಗಮನಿಸಿದರೇ ಒಬ್ಬ ಮಾಜಿ ಮುಖ್ಯಮಂತ್ರಿಯ ಇಂದಿನ ಸ್ಥಿತಿ ಬಗ್ಗೆ ಅರಿವಾಗುತ್ತದೆ’ ಎಂದು ಕುಟುಕಿದರು.
ಮಾಜಿ ಶಾಸಕ ಜಿ.ಡಿ. ನಾರಾ ಯಣಪ್ಪ, ಮುಖಂಡರಾದ ನಗರದ ಮಹಾದೇವಪ್ಪ, ಶಾಂತವೀರಪ್ಪಗೌಡ, ಗೋಣಿ ಮಾಲತೇಶ್, ತಬಲಿ ಬಂಗಾರಪ್ಪ. ಬಿ.ಪಿ. ರಾಮಚಂದ್ರಪ್ಪ, ಹುಲ್ಮಾರ್ ಮಹೇಶ್, ಬಿ.ಸಿ. ವೇಣುಗೋಪಾಲ್, ಎನ್. ಅರುಣ್ಕುಮಾರ್, ಶಿವಲಿಂಗಪ್ಪ, ಭಂಡಾರಿ ಮಾಲತೇಶ್, ಶಿವ್ಯಾನಾಯ್ಕ, ಹಬಿೀಬುಲ್ಲಾ, ಪುಷ್ಪಾ ಮಂಜಪ್ಪ, ಮಲ್ಲೇನಹಳ್ಳಿ ಹನುಮಂತಪ್ಪ, ಸುರೇಶ್ ಧಾರಾವಾಡ, ಎ.ಬಿ. ಸುಧೀರ್, ಪುರಸಭೆ ಸದಸ್ಯರು, ತಾಲ್ಲೂಕು ಪಂಚಾಯ್ತಿ ಸದಸ್ಯರು ಮತ್ತಿತರರು
ಉಪಸ್ಥಿತರಿದ್ದರು.