ಬೆಂಗಳೂರಿನ ವಿಜಯ ಕಾಲೇಜಿನಲ್ಲಿ (ಜ. 12 ರಂದು) ನಡೆದ ಸಂವಾದ ಕಾರ್ಯಕ್ರಮದಲ್ಲಿ `ಜಾತೀಯತೆ~ ಕುರಿತ ಓದುಗರ ಪ್ರಶ್ನೆಗಳಿಗೆ ಲೇಖಕ ಡಾ. ಎಸ್.ಎಲ್ ಭೈರಪ್ಪ ಅವರು ತೀರಾ ಲಘುವಾದ ಧಾಟಿಯಲ್ಲಿ ಉತ್ತರಿಸುತ್ತಾ `ನಮ್ಮ ದೇಶವನ್ನು ನಿಜವಾಗಿ ಕಾಡುತ್ತಿರುವುದು ಭ್ರಷ್ಟಾಚಾರವೇ ಹೊರತು ಜಾತಿಯಲ್ಲ.
`ಬ್ರಾಹ್ಮಣರನ್ನೂ; ಮೇಲ್ಜಾತಿಯವರನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ. ವಿವಾಹ ನೋಂದಣಿ ಕಚೇರಿಗೆ ಹೋಗಿ ನೋಡಿ; ಅಪಾರ ಸಂಖ್ಯೆಯಲ್ಲಿ ಅಂತರ್ಜಾತೀಯ ವಿವಾಹಗಳಾಗುತ್ತಿವೆ.
ಖಾಸಗಿ ಕಂಪೆನಿಗಳು ಈಗ ಅಭ್ಯರ್ಥಿಗಳ ಜಾತಿ ಯಾವುದೆಂದು ಕೇಳುವುದೇ ಇಲ್ಲ. ಪದವಿ ಪ್ರಮಾಣ ಪತ್ರಗಳನ್ನೂ ಲೆಕ್ಕಿಸುವುದಿಲ್ಲ. ಅವರು ಕೊಡುವ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಸಾಕು; ಯಾರಿಗೆ ಬೇಕಾದರೂ ಕೆಲಸ ಕೊಡುತ್ತವೆ. ಈಗ ಜಾತಿ ಕುರಿತು ಮಾತನಾಡುತ್ತಿರುವವರು ಇಬ್ಬರು ಮಾತ್ರ. ಒಬ್ಬ ರಾಜಕಾರಣಿ, ಮತ್ತೊಬ್ಬ ಸಾಹಿತಿ ಎಂಬ ಮಾತುಗಳನ್ನು ಆಡಿದ್ದಾರೆ.
ಎಲ್ಲ ಜಾತಿಗಳೂ ಈಗ ಮಠ ಕಟ್ಟಿಕೊಳ್ಳುತ್ತಿವೆ. ಮೀಸಲಾತಿ ಸಿಗುತ್ತದೆ ಎಂದರೆ ಎಲ್ಲರೂ ದಲಿತರಾಗಲು ಸಿದ್ಧರಾಗಿ ನಿಂತಿದ್ದಾರೆ. ಜಾತಿ ಹೆಸರಿನಲ್ಲಿ ಎಲ್ಲ ಅವಕಾಶಗಳನ್ನು ಕಬಳಿಸುವ ಪ್ರವೃತ್ತಿ ಎಲ್ಲರಲ್ಲೂ ವ್ಯಾಪಕವಾಗಿ ಕಂಡು ಬರುತ್ತಿದೆ.
ನವ ಬ್ರಾಹ್ಮಣ್ಯವನ್ನು ಆವಾಹಿಸಿಕೊಂಡು ಈ ಶ್ರೇಣೀಕೃತ ವ್ಯವಸ್ಥೆಯಲ್ಲಿ ಶ್ರೇಷ್ಠರೆಂದು ಬಿಂಬಿಸಿಕೊಳ್ಳುವ ವ್ಯಸನದಲ್ಲಿ ನರಳುತ್ತಿರುವ ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಭೈರಪ್ಪನವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅವರು ಅರ್ಧ ಸತ್ಯದ ಮಾತುಗಳನ್ನು ಆಡುತ್ತಿದ್ದಾರೆ.